Home ಸುದ್ದಿ ರಾಜ್ಯ ಸಂಚಾರ ನಿಯಮ ಉಲ್ಲಂಘನೆ ದಂಡ ಕಟ್ಟಲು ಶೇ 50ರಷ್ಟು ರಿಯಾಯಿತಿ

ಸಂಚಾರ ನಿಯಮ ಉಲ್ಲಂಘನೆ ದಂಡ ಕಟ್ಟಲು ಶೇ 50ರಷ್ಟು ರಿಯಾಯಿತಿ

0
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ದೊಡ್ಡ ಮಟ್ಟದ ರಿಯಾಯಿತಿ ಘೋಷಿಸಿರುವುದರಿಂದ ವಾಹನ ಚಾಲಕರಲ್ಲಿ ಸಂತೃಪ್ತಿ ಮೂಡಿದೆ. ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳು ಮತ್ತು ಸಾರಿಗೆ ಇಲಾಖೆಯಲ್ಲಿ ದೀರ್ಘಕಾಲದಿಂದ ಬಾಕಿಯಾಗಿರುವ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿ ನೀಡುವಂತೆ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಕಳೆದ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರ ವರೆಗೆ ಇದೇ ರೀತಿಯ ರಿಯಾಯಿತಿ ಘೋಷಿಸಲಾಗಿತ್ತು. ಅದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣ, ಮತ್ತೊಮ್ಮೆ ರಿಯಾಯಿತಿ ಅವಧಿಯನ್ನು ಸರ್ಕಾರ ಘೋಷಿಸಿದೆ.

ಯಾವ ದಂಡಗಳಿಗೆ ರಿಯಾಯಿತಿ?: 2019ರಿಂದ 2025ರ ಸೆಪ್ಟೆಂಬರ್ ಅಂತ್ಯವರೆಗೆ ದಾಖಲಾಗಿರುವ ಇ-ಚಲನ್‌ ಸಂಚಾರಿ ಉಲ್ಲಂಘನೆ ಪ್ರಕರಣಗಳು ಹಾಗೂ 1991ರಿಂದ 2020ರವರೆಗೆ ಸಾರಿಗೆ ಇಲಾಖೆಯಲ್ಲಿ ಬಾಕಿಯಾಗಿರುವ ದಂಡ ಪ್ರಕರಣಗಳು ಇವುಗಳಿಗೆ ಅರ್ಧ ದಂಡ ಮಾತ್ರ ಪಾವತಿಸಿದರೆ ಸಾಕು.

ದಂಡ ಪಾವತಿಸಲು ಅವಕಾಶ ಇರುವ ಅವಧಿ: ನವೆಂಬರ್ 21 ರಿಂದ – ಡಿಸೆಂಬರ್ 12, 2025

ಬಾಕಿಗಳ ಎಷ್ಟು?: 4.44 ಕೋಟಿ ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿದ್ದು ಪಾವತಿಯಾಗಬೇಕಾಗಿರುವ ಒಟ್ಟು ಮೊತ್ತ: ₹2,695 ಕೋಟಿ ರೂ. ಆಗಿದೆ. 1991ರಿಂದ 2020ರವರೆಗೆ ಸಾರಿಗೆ ಇಲಾಖೆಯಲ್ಲಿ ಮಾತ್ರ 4,27,837 ಪ್ರಕರಣಗಳು ಇನ್ನೂ ಬಾಕಿ ಇವೆ.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಮಾತನಾಡಿ, “ನಿಗದಿತ ಅವಧಿಯೊಳಗೆ ಚಾಲಕರು ರಿಯಾಯಿತಿಯ ಪ್ರಯೋಜನ ಪಡೆದು ದಂಡ ಪಾವತಿಸಿ ಪ್ರಕರಣಗಳನ್ನು ವಿಲೇವಾರಿ ಮಾಡಿಕೊಂಡರೆ ಭವಿಷ್ಯದಲ್ಲಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಬಹುದು,” ಎಂದಿದ್ದಾರೆ.

ಈ ತೀರ್ಮಾನದಿಂದ ರಾಜ್ಯದ ಕೋಟ್ಯಾಂತರ ವಾಹನ ಸವಾರರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version