ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳೂ ಹಿಂದೆ ಬಿದ್ದಿಲ್ಲ. ರಾಜ್ಯಾದ್ಯಂತ ಸುಮಾರು 2.69 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದರ ದಂಡದ ಮೊತ್ತ ಬರೋಬ್ಬರಿ 13 ಕೋಟಿ ರೂಪಾಯಿಗಳಷ್ಟಿದೆ. ಇಷ್ಟು ದೊಡ್ಡ ಮೊತ್ತದ ದಂಡ ಪಾವತಿಸಲು ಸಂಸ್ಥೆಗೆ ಹೊರೆಯಾಗಿಲಿದ್ದು ಟ್ರಾಫಿಕ್ ಫೈನ್ ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವರು ಪತ್ರ ಬರೆದಿದ್ದಾರೆ.
ಕೆಎಸ್ಆರ್ಟಿಸಿ ಬಸ್ಗಳಿಗೆ 13 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ. ಬಸ್ಗಳ ಮೇಲೆ ಒಟ್ಟು 2,69,198 ಪ್ರಕರಣಗಳಿವೆ. ಶೇ. 50 ರಿಯಾಯಿತಿ ದರದಲ್ಲಿ ಕೆಎಸ್ಆರ್ಟಿಸಿ ಬಸ್ಗಳಿಗೆ ವಿಧಿಸಿರುವ ದಂಡ 6,64,96,400 ರೂ. ಆಗಲಿದೆ. ಆದರೆ, ಈ ದಂಡದ ಮೊತ್ತವನ್ನು ಮನ್ನಾ ಮಾಡುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?: ರಾಜ್ಯದಲ್ಲಿ ಒಟ್ಟು 24,000 ಬಸ್ಗಳಿವೆ. ಕೆಲ ವೇಳೆ ಸಿಸಿಟಿವಿಯಲ್ಲಿ ತಪ್ಪಾಗಿ ಸಂಚಾರ ಉಲ್ಲಂಘನೆ ದಾಖಲಾಗಿದೆ. ಒಟ್ಟು ಪ್ರಕರಣಗಳನ್ನು ಪರಿಶೀಲಿಸಿದಾಗ, 1,95,009 ಪ್ರಕರಣಗಳು ಪಥ ಶಿಸ್ತು ಉಲ್ಲಂಘನೆ (ಲೇನ್ ಡಿಸಿಪ್ಲೇನ್ ವೈಯಲೇಷನ್)ಗೆ ಸಂಬಂಧಿಸಿದ್ದು. ವಾಹನಗಳು ಲೇನ್ನಲ್ಲಿ ಚಲಿಸುವಾಗ ಲೇನ್ ಪಟ್ಟಿಗಳನ್ನು ಸ್ವಲ್ಪ ತಾಗಿದರೂ ಸಹ ಸದರಿ ಸ್ಥಳದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಉಲ್ಲಂಘನೆ ಎಂದೇ ದಾಖಲಾಗಿ ದಂಡ ವಿಧಿಸಲಾಗುತ್ತಿದೆ.