ನವದೆಹಲಿ: ಜಾಹೀರಾತು ಕ್ಷೇತ್ರದಲ್ಲಿ ಸೃಜನಾತ್ಮಕತೆ ಮತ್ತು ಭಾವನಾತ್ಮಕ ಸ್ಪರ್ಶದ ಮೂಲಕ ಜನಮನ ಗೆದ್ದ ಖ್ಯಾತ ಜಾಹೀರಾತು ದಂತಕಥೆ ಪಿಯೂಷ್ ಪಾಂಡೆ (70) ಶುಕ್ರವಾರ ನಿಧನರಾದರು. ಅವರು ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.
ಪಿಯೂಷ್ ಪಾಂಡೆ ಅವರು ಸುಮಾರು ನಾಲ್ಕು ದಶಕಗಳ ಕಾಲ ಜಾಹೀರಾತು ಲೋಕದಲ್ಲಿ ಪ್ರಭಾವ ಬೀರಿ, ಭಾರತೀಯ ಬ್ರ್ಯಾಂಡ್ಗಳ ದಿಕ್ಕನ್ನು ಬದಲಿಸಿದವರು. ಅವರು ಓಗಿಲ್ವಿ ಇಂಡಿಯಾ (Ogilvy India) ಸಂಸ್ಥೆಯ ವಿಶ್ವಾದ್ಯಂತ ಮುಖ್ಯ ಸೃಜನಾತ್ಮಕ ಅಧಿಕಾರಿ (Chief Creative Officer Worldwide) ಹಾಗೂ ಭಾರತದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು.
1982ರಲ್ಲಿ ಓಗಿಲ್ವಿ ಸಂಸ್ಥೆಗೆ ಸೇರ್ಪಡೆಗೊಂಡ ಪಾಂಡೆ ಅವರು ಮೊದಲ ಜಾಹೀರಾತನ್ನು ಸನ್ಲೈಟ್ ಡಿಟರ್ಜೆಂಟ್ಗಾಗಿ ಬರೆದಿದ್ದರು. ಬಳಿಕ ಅವರು ಸೃಜನಾತ್ಮಕ ವಿಭಾಗದ ಪ್ರಮುಖ ಶಕ್ತಿಯಾಗಿ ಫೆವಿಕಾಲ್, ಕ್ಯಾಡ್ಬರಿ, ಏಷ್ಯನ್ ಪೇಂಟ್ಸ್, ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಸೇರಿದಂತೆ ಅನೇಕ ಬ್ರಾಂಡ್ಗಳಿಗೆ ಐಕಾನಿಕ್ ಜಾಹೀರಾತುಗಳನ್ನು ಸೃಷ್ಟಿಸಿದರು.
ಅವರ ನಾಯಕತ್ವದಲ್ಲಿ ಓಗಿಲ್ವಿ ಇಂಡಿಯಾ 12 ವರ್ಷಗಳ ಕಾಲ ದಿ ಎಕನಾಮಿಕ್ ಟೈಮ್ಸ್ ನಡೆಸಿದ ಏಜೆನ್ಸಿ ರೆಕನರ್ ಸಮೀಕ್ಷೆಯಲ್ಲಿ ನಂಬರ್ 1 ಏಜೆನ್ಸಿಯಾಗಿ ಆಯ್ಕೆಯಾಯಿತು. 2016ರಲ್ಲಿ ಪಾಂಡೆ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪಾಂಡೆ ಅವರು ಕೇವಲ ಜಾಹೀರಾತುಗಳಲ್ಲದೆ ಸಂವಹನ, ಭಾಷೆ ಮತ್ತು ಭಾವನೆಗಳ ಮೂಲಕ ಭಾರತೀಯ ಮನಸ್ಸಿನ ನುಡಿಸೂಕ್ಷ್ಮತೆಗಳನ್ನು ಜಾಹೀರಾತುಗಳಲ್ಲಿ ಹತ್ತಿರದಿಂದ ತೋರಿಸಿದವರು. “ಫೆವಿಕಾಲ್ – ಜೋರ್ದಾರ್ ಜೋಡ್”, “ಕ್ಯಾಡ್ಬರಿ – ಕುಚ್ ಖಾಸ್ ಹೈ” ಮುಂತಾದ ಸ್ಲೋಗನ್ಗಳು ಇಂದು ಸಹ ನೆನಪಿನಲ್ಲೇ ಉಳಿದಿವೆ.
ಅವರು 2013ರಲ್ಲಿ “ಮದ್ರಾಸ್ ಕೆಫೆ” ಚಿತ್ರ ಮತ್ತು ಐಸಿಐಸಿಐ ಬ್ಯಾಂಕ್ನ ಮ್ಯಾಜಿಕ್ ಪೆನ್ಸಿಲ್ ಪ್ರಾಜೆಕ್ಟ್ ವೀಡಿಯೊ ಮೂಲಕ ನಟನೆಯಲ್ಲೂ ಕಾಲಿಟ್ಟಿದ್ದರು.
ಜಾಹೀರಾತಿನ ಹೊರತಾಗಿಯೂ, ಪಾಂಡೆ ಅವರು ಭಾರತೀಯ ಏಕತೆ ಮತ್ತು ಭಾವನಾತ್ಮಕತೆಯ ಪ್ರತಿ ರೂಪವಾದ “ಮಿಲೇ ಸುರ್ ಮೇರಾ ತುಮ್ಹಾರಾ” ಎಂಬ ಹಾಡಿನ ಗೀತ ರಚನೆಕಾರರಾಗಿದ್ದರು. ಜೊತೆಗೆ “ಭೋಪಾಲ್ ಎಕ್ಸ್ಪ್ರೆಸ್” ಚಿತ್ರಕ್ಕೂ ಸಹ ಬರೆದಿದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಅರ್ಪಿಸಿ, “ಭಾರತೀಯ ಜಾಹೀರಾತಿನ ದೈತ್ಯ ಮತ್ತು ದಂತಕಥೆಯಾಗಿದ್ದ ಪಾಂಡೆ, ದೈನಂದಿನ ಭಾಷಾ ವೈಶಿಷ್ಟ್ಯ, ಮಣ್ಣಿನ ಹಾಸ್ಯ ಮತ್ತು ನಿಜವಾದ ಉಷ್ಣತೆಯ ಮೂಲಕ ಸಂವಹನವನ್ನು ಪರಿವರ್ತಿಸಿದರು,” ಎಂದು ಹೇಳಿದ್ದಾರೆ.
ಪಾಂಡೆ ಅವರ ನಿಧನದಿಂದ ಭಾರತೀಯ ಜಾಹೀರಾತು ಕ್ಷೇತ್ರವು ತನ್ನ ಅತ್ಯಂತ ಪ್ರತಿಭಾವಂತ ಮತ್ತು ಮನಸ್ಸು ಮುಟ್ಟುವ ಸೃಜನಶೀಲ ಮನುಷ್ಯನನ್ನು ಕಳೆದುಕೊಂಡಿದೆ.
