ಕೇರಳದಲ್ಲಿ ಹಿಜಾಬ್ ವಿವಾದ: ಶಾಲೆ ಬಿಟ್ರು ಹಿಜಾಬ್ ಬಿಡಲಿಲ್ಲ!

0
14

ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿವಾದ ಇದೀಗ ಕೇರಳದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. ಸರ್ಕಾರದ ಮಧ್ಯಪ್ರವೇಶದ ಹೊರತಾಗಿಯೂ, ಸಿಬಿಎಸ್‌ಇ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಅನುಮತಿ ದೊರೆಯದ ಕಾರಣ, ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯನ್ನು ಬದಲಾಯಿಸಲು ನಿರ್ಧರಿಸಿದ್ದಾಳೆ. ಈ ಘಟನೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಾಲೆಯ ನಿಯಮಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ತಿರುವನಂತಪುರಂನ ಸೈಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಶಾಲೆಗೆ ಬರಲು ಅನುಮತಿ ಕೋರಿದ್ದಳು. ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಈ ಶಾಲೆಯ ಆಡಳಿತ ಮಂಡಳಿ, ತಮ್ಮ ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯವಾಗಿದ್ದು, ಹಿಜಾಬ್ ಧರಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಇದರಿಂದ ನೊಂದ ವಿದ್ಯಾರ್ಥಿನಿ, ಸರ್ಕಾರದ ನೆರವನ್ನು ಕೋರಿ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಳು. ಸಚಿವರು, ವಿದ್ಯಾರ್ಥಿನಿಯ ಮೂಲಭೂತ ಹಕ್ಕನ್ನು ಎತ್ತಿಹಿಡಿದು, ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ್ದರು.

ಆದರೆ ಶಾಲೆಯು 2018ರ ಕೇರಳ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಖಾಸಗಿ ಶಾಲೆಗಳು ತಮ್ಮದೇ ಆದ ಸಮವಸ್ತ್ರ ನೀತಿಯನ್ನು ಹೊಂದುವ ಹಕ್ಕನ್ನು ಹೊಂದಿವೆ ಎಂದು ವಾದಿಸಿತು. ಸಮವಸ್ತ್ರ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಒತ್ತಿಹೇಳಿದ ಶಾಲೆಯ ಪ್ರಾಂಶುಪಾಲರು, “ನಾವು ವಿದ್ಯಾರ್ಥಿನಿಯನ್ನು ಶಾಲೆಯಿಂದ ತೆಗೆದುಹಾಕಿಲ್ಲ, ಬದಲಿಗೆ ಸಮವಸ್ತ್ರ ಧರಿಸಿ ಬರುವಂತೆ ಸೂಚಿಸಿದ್ದೇವೆ” ಎಂದು ತಿಳಿಸಿದರು.

ಈ ವಿಷಯ ಧಾರ್ಮಿಕ ಮತ್ತು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ವಿದ್ಯಾರ್ಥಿನಿಯ ತಂದೆ ಅನಸ್ ನೈನಾ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಸರ್ಕಾರ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಇದು ನಮ್ಮ ಮೂಲಭೂತ ಹಕ್ಕು ಎಂದು ಹೇಳಿತ್ತು. ಆದರೆ, ಹಿಜಾಬ್ ಧರಿಸಿದರೆ ಇತರ ವಿದ್ಯಾರ್ಥಿಗಳು ಹೆದರಬಹುದು ಎಂದು ಶಾಲೆಯ ಶಿಕ್ಷಕರು ನನ್ನ ಮಗಳಿಗೆ ಹೇಳಿದ್ದು, ಆಕೆಗೆ ತೀವ್ರ ನೋವನ್ನುಂಟು ಮಾಡಿದೆ” ಎಂದು ಬರೆದುಕೊಂಡಿದ್ದಾರೆ.

ಈ ಘಟನೆ ತನ್ನ ಮಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಅನಸ್, ಬೇರೆ ಶಾಲೆಗೆ ವರ್ಗಾವಣೆ ಪತ್ರ  ಪಡೆದು, ತಮ್ಮ ಮಗಳನ್ನು ಬೇರೊಂದು ಶಾಲೆಗೆ ಸೇರಿಸುವುದಾಗಿ ನಿರ್ಧರಿಸಿದ್ದಾರೆ. ಅನಸ್ ಶಾಲೆಯ ಆಡಳಿತ, ಶಿಕ್ಷಕರ ಸಂಘ ಮತ್ತು ಇತರೆ ಯಾರೂ ತಮ್ಮ ಹೆಸರು ಮತ್ತು ಧರ್ಮವನ್ನು ಧಾರ್ಮಿಕ ಸಾಮರಸ್ಯ ಕದಡಲು ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಅಕ್ಟೋಬರ್ 7ರಂದು ಹಿಜಾಬ್ ಧರಿಸಿ ಶಾಲೆಗೆ ಬಂದಾಗ, ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕಳುಹಿಸಲಾಗಿತ್ತು. ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಎಂದು ಸರ್ಕಾರ ಅಭಿಪ್ರಾಯಪಟ್ಟಿತ್ತು.ಈ ಘಟನೆ, ವೈಯಕ್ತಿಕ ನಂಬಿಕೆಗಳು ಮತ್ತು ಸಂಸ್ಥೆಯ ನಿಯಮಗಳ ನಡುವಿನ ಸೂಕ್ಷ್ಮ ಸಮತೋಲನದ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Previous articleಕನೇರಿ ಶ್ರೀಗಳ ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
Next articleಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್

LEAVE A REPLY

Please enter your comment!
Please enter your name here