ಹುಬ್ಬಳ್ಳಿ: “ಕರ್ನಾಟಕ ಮಾಡೆಲ್ ಜಾತಿ ಗಣತಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿಪ್ಪೆಗೆ ಎಸೆಯಿತು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಜೆಪಿಯ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಗೇಲಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಆರು ತಿಂಗಳ ಹಿಂದೆ ಕರ್ನಾಟಕ ಮಾದರಿಯಲ್ಲಿ ಜಾತಿ ಗಣತಿ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ಕೊಟ್ಟಿದ್ದಿರಿ. ವೀರಾವೇಶದ ಭಾಷಣ ಮಾಡಿದ್ದಿರಿ. ಆದರೆ ನಿಮ್ಮ ಕರ್ನಾಟಕ ಮಾಡೆಲ್ ಜಾತಿ ಗಣತಿಯನ್ನು ನಿಮ್ಮದೇ ಹೈಕಮಾಂಡ್ ತಿಪ್ಪೆಗೆ ಎಸೆಯಿತು.” ಎಂದು ಬರೆದುಕೊಂಡಿದ್ದಾರೆ.
“ಈಗ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎಐಸಿಸಿ ಹಿಂದುಳಿದ ವರ್ಗದ ಸಭೆಯಲ್ಲಿ ತೆಲಂಗಾಣ ಮಾದರಿಯಲ್ಲಿ ರಾಷ್ಟ್ರಾದ್ಯಂತ ಜಾತಿ ಗಣತಿ ಮಾಡಬೇಕೆಂದು ಕೇಂದ್ರಕ್ಕೆ ಸಲಹೆ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾತು ಕೇಳಿದೆ. ಹಿಂದುಳಿದ ವರ್ಗದ ಚಾಂಪಿಯನ್ ಎಂಬ ಸ್ವಘೋಷಿತ ಬಿರುದನ್ನು ನಿಮ್ಮದೇ ಹೈಕಮಾಂಡ್ ಈಗ ಕಿತ್ತು ಹಾಕಿದೆ. ಆದರೂ ಅಭಿಮಾನ ಶೂನ್ಯರಂತೆ ಈ ಹರಿದ ಪೋಷಾಕು ಧರಿಸಿ ನೀವ್ಯಾಕೆ ಮೆರೆಯುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಗೆ ಹಿಂದುಳಿದ ವರ್ಗದ ಬಗ್ಗೆ ಕಾಳಜಿ ಇಲ್ಲ ಎಂದು ಪುಗ್ಸಟ್ಟೆ ಭಾಷಣ ಬಿಗಿಯುವುದಕ್ಕೆ ಮುನ್ನ ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಮೇಲಿಟ್ಟ ಕಾಳಜಿಯನ್ನು ಸ್ವಲ್ಪ ಅವಲೋಕಿಸಿ. ದೀಪದ ಬುಡ ಕತ್ತಲಲ್ಲವೇ” ಎಂದು ಹೇಳಿದ್ದಾರೆ.