Home ತಾಜಾ ಸುದ್ದಿ ಕಲುಷಿತ ಆಹಾರ ಸೇವನೆ: ವಿದ್ಯಾರ್ಥಿ ಸಾವು, 29 ಜನ ಅಸ್ವಸ್ಥ

ಕಲುಷಿತ ಆಹಾರ ಸೇವನೆ: ವಿದ್ಯಾರ್ಥಿ ಸಾವು, 29 ಜನ ಅಸ್ವಸ್ಥ

0

ಮಳವಳ್ಳಿ: ಕಾರ್ಯಕ್ರಮವೊಂದರ ಊಟ ಸೇವಿಸಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿ 29 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕಾಗೇಪುರದಲ್ಲಿ ನಡೆದಿದೆ.
ಮೇಘಾಲಯ ರಾಜ್ಯದ ಗೋಕುಲ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಕೇರ್ಲಾಂಗ್(೧೪) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ವಿವರ: ಪಟ್ಟಣದ ಹೊರವಲಯದ ಭೂಗತಹಳ್ಳಿ ಸಮೀಪವಿರುವ ಮದನ್ ಮೋಹನ್ ಸಮುದಾಯ ಭವನದಲ್ಲಿ ಸೇಠು ಸಮುದಾಯವರು ಹೋಳಿ ಹಬ್ಬ ಆಚರಣೆ ಮಾಡಿದ್ದರು. ಹೋಳಿ ಸಂಭ್ರಮದ ಮುಗಿದ ಬಳಿಕ ಬಾತು ತಿಂದು ಉಳಿದ ಊಟವನ್ನು ಪಕ್ಕದಲ್ಲೆ ಇದ್ದ ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಗೆ ನೀಡಲಾಗಿತ್ತು. ಶನಿವಾರ ಬಾತು ತಿಂದ ೩೦ ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣದಲ್ಲಿಯೇ ಸಮೀಪವಿದ್ದ ತಳಗವಾದಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು ಎನ್ನಲಾಗಿದೆ. ರಾತ್ರಿ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ವಾಂತಿ-ಭೇದಿ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಎಲ್ಲಾ ವಿದ್ಯಾರ್ಥಿಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಬೆಳಿಗ್ಗೆ ೮ಗಂಟೆ ಸಮಯದಲ್ಲಿ ಕೇರ್ಲಾಂಗ್ ಎಂಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಭೇಟಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಸಕ ಪಿ.ಎಂ ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ. ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಶೀಲ್ದಾರ್ ಲೊಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದರು. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ರವಾಣಿಸುವಂತೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ತಾಲ್ಲೂಕಿನ ಕಾಗೇಪುರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯ ವಸತಿ ನಿಲಯಕ್ಕೆ ಸರಬರಾಜು ಆದ ಊಟದಲ್ಲಿ ವ್ಯಾತ್ಯಾಸ ಉಂಟಾಗಿ ಈ ಘಟನೆ ಸಂಭವಿಸಿದೆ. ಶಾಲೆಯಲ್ಲಿ ಆಗಿರುವ ತಪ್ಪಿಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಜವಾಬ್ದಾರಿಯುತವಾದ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಎಲ್ಲಾ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ ಎಂದರು. ಮಾಜಿ ಶಾಸಕ ಡಾ. ಕೆ.ಅನ್ನದಾನಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದರು.
ಕಾಗೇಪುರದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಎಲ್‌ಕೆಜಿಯಿಂದ ೮ನೇ ತರಗತಿವರೆಗೆ ಅನುಮತಿ ಪಡೆಯಲಾಗಿತ್ತು, ಶಾಲೆಗಷ್ಟೇ ಅನುಮತಿ ಪಡೆದಿರುವುದು, ವಸತಿ ಶಾಲೆಗೆ ಅನುಮತಿ ಪಡೆದಿಲ್ಲ, ೨೪ ಮೇಘಾಲಯ ರಾಜ್ಯದವರು, ೬ ಸ್ಥಳೀಯ ಮಕ್ಕಳು ಆಹಾರ ಸೇವಿಸಿದ್ದಾರೆ, ಮಕ್ಕಳನ್ನ ಇಟ್ಟುಕೊಳ್ಳುವುದಕ್ಕೆ ಅನುಮತಿ ಇಲ್ಲ, ಆದರೂ ಮಕ್ಕಳನ್ನ ಇಲ್ಲಿ ಇಟ್ಟುಕೊಂಡಿರೋದು ತಪ್ಪು, ಅದರಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ, ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ, ಓರ್ವ ವಿದ್ಯಾರ್ಥಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ಅಗತ್ಯ ಚಿಕಿತ್ಸೆಗೆ ಎಲ್ಲಾ ನೆರವು ನೀಡಲಾಗುವುದು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ಅನುಮತಿ ಇಲ್ಲದೇ ಅನಧಿಕೃತವಾಗಿ ಮಕ್ಕಳನ್ನ ಇಟ್ಟುಕೊಂಡಿರೋದು ಕಂಡು ಬಂದಿದೆ, ಮೂಲ ಸೌಕರ್ಯ ಕೂಡ ಇಲ್ಲ, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಫುಡ್ ತಯಾರು ಮಾಡಿದ್ದು ಯಾರು, ಯಾರು ಆರ್ಡರ್ ಕೊಟ್ಟಿದ್ದರು ಇದರಲ್ಲಿ ಯಾರ ಯಾರ ನಿರ್ಲಕ್ಷ್ಯ ಇದೆ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಗೋಕುಲ ವಿದ್ಯಾಸಂಸ್ಥೆಯ ಲಂಕೇಶ್ ಮಾತನಾಡಿ, ಮೇಘಾಲಯದ ೨೬ ವಿದ್ಯಾರ್ಥಿಗಳನ್ನು ಪೋಷಕರ ಅನುಮತಿ ಮೇರೆಗೆ ದತ್ತು ಪಡೆದು ಗೋಕುಲ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಹುಟ್ಟುಹಬ್ಬ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ಕೊಡುವುದು ರೂಢಿಯಲ್ಲಿತ್ತು. ಅದರಂತೆ ಮದನ್ ಸಮುದಾಯದಲ್ಲಿ ಕಾರ್ಯಕ್ರಮ ನಡೆಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಊಟ ಕೊಟ್ಟಿದ್ದಾರೆ, ಊಟ ತಿಂದ ವಿದ್ಯಾರ್ಥಿಗಳಿಗೆ ವಾಂತಿ ಪ್ರಾರಂಭವಾಗಿದೆ, ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಾಲೆಗೆ ಕರೆತರಲಾಗಿತ್ತು, ರಾತ್ರಿ ವಾಂತಿಬೇದಿ ಹೆಚ್ಚಾಗಿದ್ದರಿಂದ ಬೆಳಿಗ್ಗೆ ಆಸ್ಪತ್ರೆಗೆ ಸೇರಿಸಲಾಗಿತ್ತು, ಒರ್ವ ವಿದ್ಯಾರ್ಥಿ ಸಾವನ್ನಪ್ಪಿ ಉಳಿದ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದರು.

Exit mobile version