Home ತಾಜಾ ಸುದ್ದಿ ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎನ್ನುವುದು ಸರಿಯಲ್ಲ

ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎನ್ನುವುದು ಸರಿಯಲ್ಲ

0

ಹುಬ್ಬಳ್ಳಿ: ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷ ನನಗೆ ಸ್ಥಾನಮಾನ ನೀಡಿದೆ. ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳುವುದು ಸರಿಯಲ್ಲ ಎಂದು ಕೇಂದ್ರದ ರಾಸಾಯನಿಕ ಹಾಗೂ ಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಪೇಕ್ಷೆ ಪಡದಿದ್ದಾಗಲೂ ಪಕ್ಷ ಸದಾ ಒಂದಿಲ್ಲೊಂದು ಜವಾಬ್ದಾರಿ ಕೊಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ೧೨ ಜನ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ವಿಚಾರ ಚುನಾವಣೆ ಘೋಷಣೆ ನಂತರ ನಡೆಯಲಿದೆ. ಅಲ್ಲಿಯವರೆಗೂ ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸಬಾರದು ಎಂದರು.
೧೨ ಜನರ ಬದಲಾವಣೆ ಆಗಲಿದೆ ಎನ್ನುವುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕುರಿತು ಅವಲೋಕನ ಮಾಡಿದ್ದೇವೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೩೫ ಸ್ಥಾನ ಬರಲು ಜನರಿಗೆ ಮೋಸ ಮಾಡಿ ಟೋಪಿ ಹಾಕಿದ್ದು ಕಾರಣ. ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಅದೊಗತಿಗೆ ತರಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಕಾಂಗ್ರೆಸ್‌ನ ಎಟಿಎಂನಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಕಾಂಗ್ರೆಸ್ ದುರುದ್ದೇಶದ ಬಗ್ಗೆ ಜನರು ಈಗಾಗಲೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಎರಡು ತಿಂಗಳಲ್ಲಿ ಕಾಂಗ್ರೆಸ್‌ನವರ ಬಣ್ಣವನ್ನು ಮತದಾರರು ಬಯಲಿಗೆ ತರುತ್ತಾರೆ ಎಂದು ಹೇಳಿದರು.
ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇವೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ಕಾಂಗ್ರಸ್‌ನವರು ನೀಡಲಿ. ಮೋದಿಯವರು ಪ್ರತಿಯೊಬ್ಬರಿಗೆ ಹದಿನೈದು ಲಕ್ಷ ಕೊಡುತ್ತಾರೆ ಎಂದಿರುವ ವಿಡಿಯೋ ದಾಖಲೆಗಳಿದ್ದರೆ ಕೊಡಲಿ. ನಾವು ಸಿದ್ದರಾಮಯ್ಯನವರು ನೀಡಿರುವ ಆಶ್ವಾಸನೆಗಳ ಕುರಿತು ವಿಡಿಯೋ ಕೊಟ್ಟಿದ್ದೇವೆ ಎಂದರು.

Exit mobile version