ಭಟ್ಕಳ: ತಾಲೂಕಿನ ನೇತ್ರಾಣಿ ದ್ವೀಪದ ಸಮೀಪ ಭಾರೀ ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ಬೋಟೊಂದು ಮಗುಚಿದ ಪರಿಣಾಮ ಬೋಟಿನಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದು ಎಲ್ಲಾ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.
ಮಹಾಮುರ್ಡೇಶ್ವರ ಎನ್ನುವ ಬೋಟು ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಮುರ್ಡೇಶ್ವರದಿಂದ ಹೊರಕ್ಕೆ ಅರಬ್ಬೀ ಸಮುದ್ರದಲ್ಲಿ ನೇತ್ರಾಣಿ ಸಮೀಪ ಇರುವಾಗ ಭಾರೀ ಅಬ್ಬರದ ತೆರೆಯ ಹೊಡೆತಕ್ಕೆ ಸಿಲುಕಿ ಮಗುಚಿತೆನ್ನಲಾಗಿದೆ.
ಬೋಟ ಮಗುಚಿದ್ದ ಪರಿಣಾಮ ಬೋಟಿನಲ್ಲಿದ್ದ ಮೀನುಗಾರರು ಸೇರಿದಂತೆ ಮೀನುಗಾರಿಕಾ ಬಲೆ ಹಾಗೂ ಇತರ ಸಾಮಗ್ರಿಗಳೂ ಕೂಡಾ ನೀರು ಪಾಲಾಗಿವೆ. ಬೋಟು ಮುಳುಗಿದ ತಕ್ಷಣ ಕರಾವಳಿ ಕಾವಲು ಪಡೆಗೆ ಕರೆ ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಇತರ ಬೋಟಿನವರು ಧಾವಿಸಿ ಬಂದು ನೀರಿಗೆ ಬಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಎಲ್ಲಾ ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ ಎನ್ನಲಾಗಿದೆ. ಬೋಟು ಕಾಯ್ಕಿಣಿಯ ಅಣ್ಣಪ್ಪ ಮೊಗೇರ ಎನ್ನುವವರಿಗೆ ಸೇರಿದ್ದಾಗಿದ್ದು, ಮುಳುಗಡೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.