ದಾಂಡೇಲಿ: ಬಿಜೆಪಿಯವರು ಧರ್ಮಸ್ಥಳ ವಿಚಾರವನ್ನು ರಾಜಕೀಯವಾಗಿ ಉಪಯೋಗ ಮಾಡಬಾರದು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.
ದಾಂಡೇಲಿಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಬಿಜೆಪಿಯವರು ಧರ್ಮಸ್ಥಳ ವಿಚಾರವನ್ನು ರಾಜಕೀಯವಾಗಿ ಬಳಸುವುದು ಒಳ್ಳೆಯದಲ್ಲ ನಾಡಿನ ಜನತೆ ಬುದ್ಧಿವಂತರಿದ್ದಾರೆ. ಜನರಿಗೆ ವಿಚಾರ ಮಾಡುವ ಶಕ್ತಿ ಇದೆ ಎಂದರು.
ಧರ್ಮಸ್ಥಳದ ಪ್ರಾವಿತ್ರ್ಯತೆ ಹಾಳು ಮಾಡುವ ಷಡ್ಯಂತ್ರಿಗಳಿಗೆ ಶಿಕ್ಷೆಯಾಗುತ್ತದೆ. ಎಸ್ಐಟಿ ಸೂಕ್ತ ತನಿಖೆ ಮಾಡುತ್ತಿದೆ. ನಾನು ಕೂಡ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಶಿಷ್ಯ ಎಂದ ಅವರು, ಸತ್ಯ ಸತ್ಯವಾಗಿ ಇರುತ್ತದೆ. ಸತ್ಯವನ್ನ ಸುಳ್ಳು ಮಾಡಲು ಸಾಧ್ಯವಿಲ್ಲ. ಅಲ್ಲಿನ ಕ್ಷೇತ್ರದ ಬಗ್ಗೆ ಆರೋಪ ಬಂದಿಲ್ಲ. ಅಲ್ಲಿನ ಸಾವುಗಳ ಬಗ್ಗೆ ಆರೋಪ ಬಂದಿದೆ. ವಿಷಯ ಕೋರ್ಟ್ಗೆ ಹೋದ ಬಳಿಕ, ರಾಜ್ಯ ಸರ್ಕಾರ ತನಿಖೆ ಮಾಡುತ್ತಿದೆ. ಧರ್ಮಸ್ಥಳದ ಪಾವಿತ್ರ್ಯತೆ ಅರಿತು ಹೆಜ್ಜೆ ಹಾಕಬೇಕು. ಇದರಲ್ಲಿ ರಾಜಕೀಯ ಬೇಕಿರಲಿಲ್ಲ ಎಂದರು.
ಯಾರು ಉದ್ಘಾಟನೆ ಮಾಡಿದರೆ ಏನು ಸಮಸ್ಯೆ?: ಮೈಸೂರು ದಸರಾ ರಾಜ್ಯದ ನಾಡ ಹಬ್ಬವಾಗಿದೆ. ಅದರ ಉದ್ಘಾಟನೆಗೆ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಅಂತ ತಾರತಮ್ಯ ಮಾಡಬಾರದು. ಎಲ್ಲ ಜನಾಂಗದವರಿಗೂ ದಸರಾ ಉದ್ಘಾಟನೆಗೆ ಹಕ್ಕಿದೆ. ಬಾನು ಮುಸ್ತಾಕ್ ಕನ್ನಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದವರು. ಇದನ್ನು ಬಿಜೆಪಿ ಗಮನಿಸಬೇಕಿತ್ತು. ಉದ್ಘಾಟನೆಗೆ ಮಹಿಳೆಯನ್ನು ಕರೆದರು ಎಂದು ತಕರಾರು ಸರಿಯಲ್ಲ. ಬಾನು ಮುಸ್ತಾಕ್ ಅವರು ಒಳ್ಳೆಯ ಲೇಖಕರು, ಒಳ್ಳೆಯ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನ ಮೆಚ್ಚಿ ಸರ್ಕಾರ ದಸರಾ ಉದ್ಘಾಟನೆಗೆ ಆಹ್ವಾನ ಮಾಡಿದೆ ಎಂದರು.