Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿನ ಹಲಸೂರು ಸೋಮೇಶ್ವರ ಗುಡಿಯಲ್ಲಿ ಮದುವೆ ಬ್ಯಾನ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಬೆಂಗಳೂರಿನ ಹಲಸೂರು ಸೋಮೇಶ್ವರ ಗುಡಿಯಲ್ಲಿ ಮದುವೆ ಬ್ಯಾನ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

0

ಬೆಂಗಳೂರು ಎಂದರೆ ಕೇವಲ ಐಟಿ-ಬಿಟಿ ಸಿಟಿಯಲ್ಲ, ಇದೊಂದು ದೇವಾಲಯಗಳ ಬೀಡು. ಅದರಲ್ಲೂ ಸಿಲಿಕಾನ್ ಸಿಟಿಯ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ದೇವಾಲಯಗಳಲ್ಲಿ ‘ಹಲಸೂರು ಸೋಮೇಶ್ವರ ದೇವಸ್ಥಾನ’ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ.

ಚೋಳರ ಕಾಲದ ಇತಿಹಾಸವಿರುವ, ಕೆಂಪೇಗೌಡರಿಂದ ಜೀರ್ಣೋದ್ಧಾರಗೊಂಡ ಈ ದೇವಸ್ಥಾನದಲ್ಲಿ ಮದುವೆಯಾದರೆ ದಂಪತಿಯ ಬದುಕು ಬಂಗಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ, ಕಳೆದ 6-7 ವರ್ಷಗಳಿಂದ ಇಲ್ಲಿ ಮದುವೆ ಕಾರ್ಯಕ್ರಮಗಳನ್ನೇ ನಿಲ್ಲಿಸಲಾಗಿದೆ ಎಂಬ ಸಂಗತಿ ನಿಮಗೆ ಗೊತ್ತೇ? ಹೌದು, ಇದಕ್ಕೆ ಕಾರಣ ಕೇಳಿದರೆ ನೀವು ನಿಜಕ್ಕೂ ಹುಬ್ಬೇರಿಸುತ್ತೀರಿ!

ಮದುವೆ ನಂತರ ಕೋರ್ಟ್ ಮೆಟ್ಟಿಲೇರುತ್ತಿದ್ದ ದಂಪತಿಗಳು!: ದೇವಸ್ಥಾನದಲ್ಲಿ ಮದುವೆಯಾದರೆ ನೂರು ಕಾಲ ಸುಖವಾಗಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಹಲಸೂರು ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಕೆಲವು ಮದುವೆಗಳ ಕಥೆ ವಿಚಿತ್ರವಾಗಿತ್ತು.

ಇಲ್ಲಿ ಸಪ್ತಪದಿ ತುಳಿದ ಎಷ್ಟೋ ಜೋಡಿಗಳು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಮನಸ್ತಾಪ ಮಾಡಿಕೊಂಡು ಪೊಲೀಸ್ ಠಾಣೆ ಮತ್ತು ಕೋರ್ಟ್ ಮೆಟ್ಟಿಲು ಹತ್ತಲಾರಂಭಿಸಿದರು. ಪರಸ್ಪರ ಹೊಂದಾಣಿಕೆ ಬಾರದೆ ವಿಚ್ಛೇದನ (Divorce) ಪಡೆಯಲು ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗತೊಡಗಿತು. ಇದು ಪರೋಕ್ಷವಾಗಿ ದೇವಸ್ಥಾನದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿತು.

ಅರ್ಚಕರಿಗೆ ಶುರುವಾಗಿತ್ತು ಸಂಕಷ್ಟ: ದಂಪತಿಗಳು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದಾಗ, ಸಾಕ್ಷಿಗಾಗಿ ಮದುವೆ ಮಾಡಿಸಿದ ಅರ್ಚಕರನ್ನು ಕರೆಯಿಸುವುದು ಅನಿವಾರ್ಯವಾಯಿತು. ಪೂಜೆ-ಪುನಸ್ಕಾರ ಮಾಡಿಕೊಂಡು ದೇವಸ್ಥಾನದಲ್ಲಿ ಇರಬೇಕಾದ ಅರ್ಚಕರು, ಪದೇ ಪದೇ ಕೋರ್ಟ್ ವಿಚಾರಣೆಗಳಿಗೆ ಹಾಜರಾಗಬೇಕಾದ ಪ್ರಸಂಗಗಳು ಎದುರಾದವು.

ಇದು ಅರ್ಚಕರಿಗೆ ಕಿರಿಕಿರಿ ಉಂಟುಮಾಡಿದ್ದಲ್ಲದೆ, ದೇವಸ್ಥಾನದ ದೈನಂದಿನ ಕೆಲಸಗಳಿಗೂ ಅಡ್ಡಿಯಾಗತೊಡಗಿತು. “ದೇವಸ್ಥಾನದಲ್ಲಿ ಮದುವೆ ಮಾಡಿಸುವುದೇ ತಪ್ಪಾಯಿತೇ?” ಎಂದು ಅರ್ಚಕರು ಬೇಸರಗೊಳ್ಳುವಂತಾಯಿತು.

ದೇವಸ್ಥಾನಕ್ಕೆ ‘ಅಪಖ್ಯಾತಿ’ ಬರುವ ಭಯ: ಸೋಮೇಶ್ವರ ದೇವಸ್ಥಾನಕ್ಕೆ ತನ್ನದೇ ಆದ ಪಾವಿತ್ರ್ಯತೆ ಮತ್ತು ಗೌರವವಿದೆ. ಆದರೆ, ಇಲ್ಲಿ ಮದುವೆಯಾದವರು ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದರೆ, ದೇವಸ್ಥಾನಕ್ಕೆ ಕಳಂಕ ಅಂಟಿಕೊಳ್ಳುವ ಸಾಧ್ಯತೆ ಇತ್ತು.

ದೇವಸ್ಥಾನದ ಹೆಸರಿಗೆ ದಕ್ಕೆ ಬರುವುದನ್ನು ತಡೆಯಲು ಮತ್ತು ಅನಗತ್ಯ ಕಾನೂನು ಹೋರಾಟಗಳಿಂದ ಅರ್ಚಕರನ್ನು ರಕ್ಷಿಸಲು, ಅಂದಿನ ಆಡಳಿತ ಮಂಡಳಿ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿತು. ಮೌಖಿಕ ಆದೇಶದ ಮೂಲಕ ದೇವಸ್ಥಾನದ ಆವರಣದಲ್ಲಿ ಮದುವೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.

ಸರ್ಕಾರಕ್ಕೆ ಲಿಖಿತ ಸ್ಪಷ್ಟನೆ: ಇತ್ತೀಚೆಗೆ ದೇವಸ್ಥಾನದಲ್ಲಿ ಮದುವೆಗಳು ಏಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆ ಮುಜರಾಯಿ ಇಲಾಖೆಯಿಂದ ಎದುರಾದಾಗ, ಪ್ರಸ್ತುತ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.

“ಹಳೆಯ ಅಹಿತಕರ ಘಟನೆಗಳು ಮರುಕಳಿಸಬಾರದು ಮತ್ತು ದೇವಸ್ಥಾನದ ಖ್ಯಾತಿಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಕಳೆದ ಏಳೆಂಟು ವರ್ಷಗಳಿಂದ ಮದುವೆಗಳನ್ನು ನಿಷೇಧಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ದೇವರೆದುರು ಪ್ರಮಾಣ ಮಾಡಿದವರು ಕೊನೆಗೆ ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತಾದ ವಿಚಿತ್ರ ಸನ್ನಿವೇಶದಿಂದಾಗಿ, ಬೆಂಗಳೂರಿನ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ಮಂಗಳವಾದ್ಯದ ಸದ್ದು ನಿಂತುಹೋಗಿರುವುದು ವಿಪರ್ಯಾಸವೇ ಸರಿ.

NO COMMENTS

LEAVE A REPLY

Please enter your comment!
Please enter your name here

Exit mobile version