ಅಥಣಿ: ನಾನು ಒಬ್ಬ ರಾಜಕಾರಣಿ, ಸಂನ್ಯಾಸಿ ಅಲ್ಲವೇ ಅಲ್ಲ. ಹೀಗಾಗಿ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ವಿವೇಚನೆ ಬಿಟ್ಟಿದ್ದು ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.
ಅಥಣಿಯಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಕೂಡಿ ಚರ್ಚೆ ಮಾಡಿದ ಮೇಲೆ ತೀರ್ಮಾನ ಆಗುತ್ತೆ. ಬಹುತೇಕ ನನಗೆ ಇರೋ ಮಾಹಿತಿ ಪ್ರಕಾರ, ಬೆಳಗಾವಿ ಅಧಿವೇಶನ ಮುಗಿಯೋವರೆಗೆ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದರು.
ನಾನು ಸಚಿವ ಸ್ಥಾನ ಬಗ್ಗೆ ಯಾವತ್ತೂ ಚಿಂತನೆ ಮಾಡಿಲ್ಲ, ಹೈಕಮಾಂಡ್, ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ, ಬಹಳಷ್ಟು ಶಾಸಕರಿಗೆ ಮಂತ್ರಿ ಸ್ಥಾನದ ಅಪೇಕ್ಷೆ ಇರುತ್ತದೆ. ನಾನಂತೂ ಸನ್ಯಾಸಿ ಅಲ್ಲ, ನಾನು ಒಬ್ಬ ರಾಜಕಾರಣಿ, ಪ್ರತಿಯೊಬ್ಬ ರಾಜಕಾರಣಿಗೂ ಕೂಡ ಅಪೇಕ್ಷೆಗಳು ಇದ್ದೇ ಇರುತ್ತವೆ ಎಂದು ಲಕ್ಷ್ಮಣ ಸವದಿ ಸಚಿವ ಸ್ಥಾನದ ಕುರ್ಚಿ ಮೇಲೆ ಟವೆಲ್ ಹಾಕಿದರು.
ಜನವರಿ ತಿಂಗಳಿನಲ್ಲಿ ಶುಕ್ರದೆಸೆ ಪ್ರಾರಂಭವಾಗುತ್ತದೆ ಎಂಬ ಹೇಳಿಕೆ ಬಗ್ಗೆ ಸವದಿ ಮಾತನಾಡಿ, ನಾನು ಯಾವ ಅರ್ಥದಲ್ಲಿ ಹೇಳಿದ್ದೀನಿ ಮುಂದೆ ಒಂದು ದಿನ ನಿಮಗೆ ಅರ್ಥ ಆಗುತ್ತದೆ. ಸಂದರ್ಭವೇ ತಮಗೆ ಅನುಭವಕ್ಕೆ ಬರುತ್ತೆ, ಶುಕ್ರದೆಸೆ ಎಂಬುವುದು ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಇರಬಹುದು, ಏನೋ ಒಂದು ಚಿಂತನೆ ಮಾಡಿ ನಾವು ಹೇಳಿರ್ತೀವಿ. ಅದು ಯಾವಾಗ ಏನಾಗುತ್ತೆ ಆವಾಗ ನಾನು ಹೇಳುತ್ತೇನೆ ಎಂದು ಸವದಿ ಪ್ರತಿಕ್ರಿಯೆ ನೀಡಿದರು.
