ನವದೆಹಲಿ: ನವೆಂಬರ್ ಕ್ರಾಂತಿ ಸುದ್ದಿಯ ಬೆನ್ನಲ್ಲೇ ವರಿಷ್ಠರ ಬುಲಾವ್ ಮೇರೆಗೆ ಹಠಾತ್ ದೆಹಲಿಗೆ ತೆರಳಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆಂದು ಹೇಳಲಾಗಿದೆ. ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕದ ರಾಜಕೀಯ ವಿದ್ಯಮಾನಗಳ ಕುರಿತು ಹೆಚ್ಚಿನ ಮಾಹಿತಿ ಬಯಸಿರುವ ವರಿಷ್ಠರು ಸತೀಶ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಬಿಹಾರ ಚುನಾವಣೆ ಮುಗಿದ ಬೆನ್ನಲ್ಲೇ ಹೈಕಮಾಂಡ್ನ ಎಲ್ಲ ನಾಯಕರೂ ಕೇಂದ್ರ ಸ್ಥಾನಕ್ಕೆ ಮರಳಿದ್ದಾರೆ. ಕರ್ನಾಟಕದಿಂದ ಸದ್ಯಕ್ಕೆ ಯಾವುದೇ ನಾಯಕರೂ ದೆಹಲಿಗೆ ಬರುವುದು ಬೇಡ ಎಂದು ತಾಕೀತು ಮಾಡಲಾಗಿದ್ದರೂ, ಸತೀಶ್ ಅವರಿಗೆ ಬುಲಾವ್ ಕೊಟ್ಟು ಕರೆಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಸತೀಶ್ ಬುಲಾವ್ ರಹಸ್ಯವೇನು?: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಂತದಲ್ಲಿ ದೆಹಲಿ ವರಿಷ್ಠರು ಸತೀಶ್ ಅವರಿಂದ ಯಾವ ಮಾಹಿತಿ ಬಯಸಿದ್ದಾರೆಂಬುದೂ ಕುತೂಹಲಕ್ಕೆ ಕಾರಣವಾಗಿದೆ. ನ. 15ಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ದೆಹಲಿಗೆ ತೆರಳಲಿದ್ದು, ಅದಕ್ಕೂ ಮುನ್ನವೇ ಸತೀಶ್ ಹೈಕಮಾಂಡ್ ಭೇಟಿ ಮಾಡಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಬುಧವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜತೆಗೂಡಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆಂದು ಹೇಳಲಾಗಿದೆ. ಹಾಗಾಗಿ ಈ ಭೇಟಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ಣಾಯಕವಾಗಲಿದೆ ಎಂದು ದೆಹಲಿ ಉನ್ನತ ಮೂಲಗಳು ತಿಳಿಸಿವೆ.
