ಮಗು ಅಪಹರಣ ಯತ್ನ

0

ಮಂಗಳೂರು: ಮನೆಯ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಲು ವಿಫಲ ಯತ್ನನಡೆಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ನಡೆದಿದೆ.
ಸುರತ್ಕಲ್‌ನಲ್ಲಿ ಸೋಮವಾರ ರಾತ್ರಿ 9 ಗಂಟೆಯ ವೇಳೆಗೆ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಚೊಕ್ಕಬೆಟ್ಟು ಜುಮಾ ಮಸೀದಿಯ ಮುಂಭಾಗದ ಮನೆಯ ಮುಂದೆ ಮಗುವೊಂದು ನಿಂತಿತ್ತು. ಅಲ್ಲಿಗೆ ಬಂದ ನೀಲಿ ಬಣ್ಣದ ಟಿ ಶರ್ಟ್ ಹಾಕಿದ್ದ ವ್ಯಕ್ತಿಯೊಬ್ಬ ಮಗುವಿನ ಕೈ ಹಿಡಿದು ‘ನಿನ್ನ ಅಣ್ಣ ಕಾರಿನಲ್ಲಿದ್ದಾನೆ. ಬಾʼ ಎಂದು ಕರೆದೊಯ್ಯಲು ಯತ್ನಿಸಿದ್ದಾನೆ. ಈ ವೇಳೆ ಮಗು ಅಣ್ಣ ಮನೆಯಲ್ಲಿದ್ದಾನೆ ಎಂದು ಆತನ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿದೆ. ಬಳಿಕ ಅಪಹರಣಕ್ಕೆ ಬಂದಿದ್ದ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಮಗುವನ್ನು ಅಪಹರಿಸಲು ಯತ್ನಿಸಿದ ದುಷ್ಕರ್ಮಿಯ ಚಲನವಲನಗಳು ಮಸೀದಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳದ ಸಮೀಪದ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Exit mobile version