ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಂತೋಷ್ ಬಾಲರಾಜ್ (34) ಮಂಗಳವಾರ ಮುಂಜಾನೆ 9.45ರ ಸುಮಾರಿಗೆ ನಿಧನ ಹೊಂದಿದರು. ಶನಿವಾರದಿಂದ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಸಂತೋಷ್ ಬಾಲರಾಜ್ ಅವಿವಾಹಿತರಾಗಿದ್ದರು. ತಾಯಿಯ ಜೊತೆ ವಾಸ ಮಾಡುತ್ತಿದ್ದರು. ತಂದೆ ಕನ್ನಡದ ಪ್ರಸಿದ್ಧ ಸಿನಿಮಾ ‘ಕರಿಯ’ ನಿರ್ಮಾಪಕರಾದ ಆನೇಕಲ್ ಬಾಲರಾಜ್.
ಪುತ್ರನಿಗಾಗಿಯೇ ಆನೇಕಲ್ ಬಾಲರಾಜ್ ‘ಕರಿಯ-2’ಚಿತ್ರವನ್ನು ನಿರ್ಮಾಣ ಮಾಡಿದ್ದರು. 2022ರಲ್ಲಿ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಸಂತೋಷ್ ಬಾಲರಾಜ್ ಕರಿಯ-2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಯುವ ನಟಕ ಅಕಾಲಿಕ ಮರಣಕ್ಕೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎರಡು ದಿನದಿಂದ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ಕೃತಕ ಉಸಿರಾಟವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ.
ಸಂತೋಷ್ ನಟಿಸಿರುವ ‘ಬರ್ಕ್ಲಿ’ ಮತ್ತು ‘ಸತ್ಯಂ’ ಸಿನಿಮಾಗಳು ಇನ್ನೂ ಬಿಡುಗಡೆ ಆಗಬೇಕಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಹಲವರು ಸಂತೋಷ್ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.
ನಟ ಸಂತೋಷ್ ಬಾಲರಾಜ್ ಅಂತಿಮ ದರ್ಶನವನ್ನು ನಟ ಲೂಸ್ ಮಾದ ಯೋಗಿ, ಚಕ್ರವರ್ತಿ ಚಂದ್ರಚೂಡ್, ಗಣಪ ಚಿತ್ರದ ನಟಿ ಪ್ರಿಯಾಂಕಾ ಮುಂತಾದವರು ಪಡೆದರು.
ನಟ ಲೂಸ್ ಮಾದ ಯೋಗಿ ಮಾತನಾಡಿ, “ನಾನು ಸಂತೋಷ್ ಒಳ್ಳೆಯ ಗೆಳೆಯ. ನಮ್ಮ ಜೊತೆ ಇರಬೇಕಿತ್ತು. ಸುಮಾರು 2 ತಿಂಗಳ ಹಿಂದೆ ಭೇಟಿ ಮಾಡಿದ್ದೆ” ಎಂದು ಹೇಳಿದರು.