ಕಣ್ಣೂರು/ಬೆಂಗಳೂರು: ಭಾರತದ ಹಾಕಿ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದ ಕೇರಳದ ಮಾಜಿ ಹಾಕಿ ಆಟಗಾರ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಮ್ಯಾನುಯೆಲ್ ಪ್ರೆಡೆರಿಕ್ (78) ಅವರು ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾದರು. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮ್ಯಾನುಯೆಲ್ ಪ್ರೆಡೆರಿಕ್ ಅವರು ಕೇರಳದ ಕಣ್ಣೂರು ಜಿಲ್ಲೆಯವರು. 1972ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡದ ಗೋಲ್ಕೀಪರ್ ಆಗಿ ಕ್ರೀಡಿಸಿದ ಅವರು, ಹಾಲೆಂಡ್ ತಂಡದ ವಿರುದ್ಧದ ಪಂದ್ಯದಲ್ಲಿ ತಮಗೆಲ್ಲಾ ನೆನಪಾಗುವಂತಹ ಪ್ರದರ್ಶನ ನೀಡಿ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಪ್ರೆಡೆರಿಕ್ ಅವರು ಒಟ್ಟು ಏಳು ವರ್ಷಗಳ ಕಾಲ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ 16 ರಾಷ್ಟ್ರೀಯ ಚಾಂಪಿಯನ್ಶಿಪ್ಗಳನ್ನು ಗೆಲ್ಲುವಲ್ಲಿ ತಂಡಕ್ಕೆ ಸಹಾಯ ಮಾಡಿದ ಅಪರೂಪದ ಗೋಲ್ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅವರು ಫುಟ್ಬಾಲ್ನಲ್ಲಿ ಸ್ಟ್ರೈಕರ್ ಆಗಿ ತಮ್ಮ ಕ್ರೀಡಾ ಜೀವನವನ್ನು ಪ್ರಾರಂಭಿಸಿ, ನಂತರ ಹಾಕಿಯತ್ತ ತಿರುಗಿ ಗೋಲ್ಕೀಪರ್ ಆಗಿ ಖ್ಯಾತಿ ಪಡೆದರು. ಕಣ್ಣೂರಿನ ಸೇಂಟ್ ಮೈಕೆಲ್ಸ್ ಶಾಲೆಯ ಮೂಲಕ ಹಾಕಿ ಕ್ರೀಡೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು.
ಅಕ್ಟೋಬರ್ 20, 1947ರಂದು ಜನಿಸಿದ ಪ್ರೆಡೆರಿಕ್ ಅವರು ಕೇವಲ 17ನೇ ವಯಸ್ಸಿನಲ್ಲಿ ಬಾಂಬೆ ಗೋಲ್ಡ್ ಕಪ್ನಲ್ಲಿ ಆಡಿದ್ದರು. ನಂತರ 1971ರಲ್ಲಿ ಭಾರತೀಯ ತಂಡದ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದರು.
ಕ್ರಿಡಾ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ 2019ರಲ್ಲಿ ಕೇಂದ್ರ ಸರ್ಕಾರದಿಂದ ಧ್ಯಾನ್ ಚಂದ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನದಿಂದ ಹಾಕಿ ಲೋಕ ದುಃಖದಲ್ಲಿದೆ. ಕ್ರೀಡಾ ವಲಯದ ಹಲವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
