ಹುಬ್ಬಳ್ಳಿ: ಇಲ್ಲಿನ ಈಶ್ವರನಗರದ ವೈಷ್ಣೋದೇವಿ ದೇವಸ್ಥಾನದ ಸ್ಥಾಪಕ ಹಾಗೂ ಆರಾಧಕ ಮೂಲತಃ ಕುಸುಗಲ್ ಗ್ರಾಮದ ದೇವಪ್ಪಜ್ಜ ವನಹಳ್ಳಿ ಅವರಿಗೆ ಚಾಕುವಿನಿಂದ ಇರಿದು ರವಿವಾರ ಸಂಜೆ ಹತ್ಯೆ ಮಾಡಲಾಗಿದೆ.
ಸಂಜೆ ಸುಮಾರು 7ಗಂಟೆ ಹೊತ್ತಿಗೆ ದೇವಸ್ಥಾನದ ಬಳಿ ಬಂದ ಅಪರಿಚಿತ ಯುವಕನೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಕೂಡಲೇ ದೇವಪ್ಪಜ್ಜನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಅಸುನೀಗಿದ್ದರು. ಈ ಕುರಿತಂತೆ ಡಿಸಿಪಿ ಮಾಲಿಂಗಪ್ಪ ನಂದಗಾವಿ ನೇತೃತ್ವದಲ್ಲಿ ಆರೋಪಿ ಪತ್ತೆಗೆ ಕಾರ್ಯಾಚರಣೆ ಪೊಲೀಸರು ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಆಸ್ತಿ ಖರೀದಿ, ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.