Home News ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಬಯಸುವುದು ತಪ್ಪಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಬಯಸುವುದು ತಪ್ಪಲ್ಲ

ಶೃಂಗೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಧಿಕಾರಕ್ಕಾಗಿ ಆಸೆಪಟ್ಟರೆ ತಪ್ಪಿಲ್ಲ. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಹಕಾರ ಸಚಿವ ಕೆ.ಎಸ್. ರಾಜಣ್ಣ ಹೇಳಿದರು.
ಶೃಂಗೇರಿ ಶಾರದಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಸುದ್ದಿಗಾರರ ಜತೆ ಮಾತನಾಡಿದರು. ಸಿಎಂ ಸ್ಥಾನಕ್ಕೆ ದಲಿತರಿಗೆ ಅವಕಾಶ ನೀಡಬೇಕೆಂಬ ಸಚಿವ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಬಯಸುವುದು ತಪ್ಪಲ್ಲ. ಎಲ್ಲರಿಗೂ ಅರ್ಹತೆ ಇದೆ. ಕೇಳ್ತಾರೆ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆಂದರು.
ಯಾರೆಲ್ಲಾ ಸಿಎಂ ಆಗಬೇಕೆನ್ನುತ್ತಾರೋ ಅವರೆಲ್ಲರಿಗೂ ಧ್ವನಿಗೂಡಿಸುತ್ತೇನೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ. ಸಭೆ ಪೂರ್ಣಗೊಂಡ ನಂತರ ಆ ಬಗ್ಗೆ ಅಂತಿಮ ನಿರ್ಣಯವಾಗಲಿದೆ ಎಂದರು.
ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ತೀರ್ಮಾನಗಳನ್ನು ತೆಗೆದುಕೊಂಡರೇ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಚುನಾವಣೆಗಳು ನಡೆಯುತ್ತಿವೆಯೆಂದು ಸರ್ಕಾರ ಯಾವ ಕೆಲಸ ಮಾಡಬಾರದೆ ಎಂದ ಅವರು, ಸ್ಥಳೀಯ ಪಂಚಾಯತ್ ಕ್ಷೇತ್ರಗಳ ಬಗ್ಗೆ ಸರ್ಕಾರದ ತೀರ್ಮಾನದಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಬಾರದು ಎಂಬ ದೃಷ್ಟಿಯಿಂದ ನೀತಿಸಂಹಿತೆ ಉಲ್ಲಂಘನೆಯಾಗದಂತೆ ತೀರ್ಮಾನಗಳನ್ನು ಸಭೆಯಲ್ಲಿ ತೆಗೆದುಕೊಳ್ಳುವುದಿಲ್ಲ ಎಂದರು.

Exit mobile version