ಗದಗ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೊಲೆಗೈದ ಘಟನೆ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಹನಮಪ್ಪ ಮುಕ್ಕಣ್ಣವರ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೆಯ ಮುಂದಿನ ರಸ್ತೆಯಲ್ಲಿ ಹಾಕಿದ್ದ ಹೆಸರಿನ ರಾಶಿಯನ್ನು ತೆಗೆದು ನನ್ನ ಕಾರು ಹೋಗಲು ಅನುಕೂಲ ಮಾಡಿಕೊಡಿ ಎಂದು ಆರೋಪಿ ಯಲ್ಲಪ್ಪ ಫಕೀರಪ್ಪ ಕುರಿ ಮೃತ ಬಸಪ್ಪ ಅವರಿಗೆ ಹೇಳಿದಾಗ ಮಾತಿಗೆ ಮಾತು ಬೆಳೆದು, ಅವಾಚ್ಯ ಶಬ್ದಗಳಿಂದ ಬೈದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಆರೋಪಿ ಯಲ್ಲಪ್ಪ ಕುರಿ ಕೈಗೆ ಸಿಕ್ಕ ಕಬ್ಬಿಣದ ರಾಡ್ನಿಂದ ಬಸಪ್ಪನ ತಲೆಗೆ ಹೊಡೆದಿದ್ದು ಬಸಪ್ಪ ಗಂಭೀರ ಗಾಯಗೊಂಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ಬಸಪ್ಪನ ಹೆಂಡತಿ ಹನಮವ್ವಳ ಕಾಲಿಗೂ ಕೂಡ ಜೋರಾಗಿ ಹೊಡೆದಿದ್ದಾನೆ. ಬಳಿಕ ಬಸಪ್ಪ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ
ಇಂದು ಮೃತಪಟ್ಟಿದ್ದಾನೆ. ಈ ಕುರಿತಂತೆ ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.