ಉಡುಪಿ: ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ.
ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯ ಅಂಗವಾಗಿ ಆಯೋಜಿಸಲಾದ ಬೃಹತ್ ಗೀತೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಮೋದಿ ಅವರ ಭೇಟಿಯು ನಡೆಯಲಿದೆ.
ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನಡೆಸುತ್ತಿರುವ ಗೀತಾ ಪ್ರಚಾರ ಕಾರ್ಯವನ್ನು ಪ್ರಧಾನಿ ಮೋದಿ ಪೂರ್ವದಲ್ಲೇ ಪ್ರಶಂಸಿಸಿದ್ದು, ಶ್ರೀಗಳು ಸಂಕಲ್ಪಿಸಿರುವ “ಕೋಟಿ ಗೀತಾ ಲೇಖನ ಯಜ್ಞ” ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನಾ ಪತ್ರವನ್ನು ರವಾನಿಸಿದ್ದರು.
ಈ ಸಲ ಪರ್ಯಾಯ ಅವಧಿಯ ಅಂಗವಾಗಿ ಪುತ್ತಿಗೆ ಶ್ರೀಗಳು ಪ್ರಧಾನಿ ಅವರನ್ನು ಕೃಷ್ಣಮಠಕ್ಕೆ ಆಹ್ವಾನಿಸಿದ್ದರು, ಅದಕ್ಕೆ ಸ್ಪಂದಿಸಿ ಮೋದಿ ಅವರು ನವೆಂಬರ್ 28ರಂದು ಆಗಮಿಸಲಿದ್ದಾರೆ ಎಂಬುದು ಅಧಿಕೃತ ಮಾಹಿತಿ.
ಪುತ್ತಿಗೆ ಶ್ರೀಪಾದರ ತೃತೀಯ ಪರ್ಯಾಯ ಸಮಯದಲ್ಲಿಯೂ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ಆಗ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಈ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದ್ದು, ಸ್ಥಳೀಯ ಆಡಳಿತ ಮತ್ತು ಮಠದ ವತಿಯಿಂದ ಸಕಲ ಸಿದ್ಧತೆಗಳು ಪ್ರಾರಂಭಗೊಂಡಿವೆ.
