Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ-ಬೀದರ್ ರಾಜಹಂಸ ಬಸ್: ಮಾರ್ಗ, ವೇಳಾಪಟ್ಟಿ, ದರ

ದಾವಣಗೆರೆ-ಬೀದರ್ ರಾಜಹಂಸ ಬಸ್: ಮಾರ್ಗ, ವೇಳಾಪಟ್ಟಿ, ದರ

0

ದಾವಣಗೆರೆ-ಬೀದರ್ ನಡುವೆ ಸಂಚಾರ ನಡೆಸುವ ಜನರಿಗೆ ಮಹತ್ವದ ಮಾಹಿತಿ ಒಂದಿದೆ. ಕೆಎಸ್ಆರ್‌ಟಿಸಿ ಈ ಮಾರ್ಗದಲ್ಲಿ ನೂತನ ರಾಜಸಂಹ ಬಸ್ ಸೇವೆಗೆ ಚಾಲನೆ ನೀಡಿದೆ. ಬಸ್ ಸಂಚಾರ ನಡೆಸುವ ಮಾರ್ಗ, ವೇಳಾಪಟ್ಟಿ ಮತ್ತು ದರದ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಯ ನೂತನ ಬಸ್ ಸೇವೆಗೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ದಾವಣಗೆರೆ, ಉಜ್ಜಿನಿಯಿಂದ ಕಲಬುರಗಿ, ಬೀದರ್‌ಗೆ ರಾಜಹಂಸ ಬಸ್ ಸಂಚಾರ ನಡೆಸಲಿದೆ.

ಕೆಎಸ್‍ಆರ್‌ಟಿಸಿ ದಾವಣಗೆರೆ-ಜಗಳೂರು-ಉಜ್ಜಿನಿ-ಕಲಬುರಗಿ-ಬೀದರ್ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆಯನ್ನು ಆರಂಭಿಸಿದೆ. ಈ ಮಾರ್ಗದ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಬುಧವಾರ ದಾವಣಗೆರೆ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂತನ ರಾಜಹಂಸ ಬಸ್‍ಗೆ ಸಂಸದರು ಹಸಿರುನಿಶಾನೆ ತೋರಿಸಿದರು. ಬಸ್ ದಾವಣಗೆರೆ, ಜಗಳೂರು, ಉಜ್ಜಿನಿ, ಕೊಟ್ಟೂರು, ಕೂಡ್ಲಗಿ, ಹೊಸಪೇಟೆ, ಸಿಂಧನೂರು, ಲಿಂಗಸೂರು, ಕಲಬುರಗಿ, ಹುಮನಾಬಾದ್ ಮಾರ್ಗವಾಗಿ ಬೀದರ್ ತಲುಪಲಿದ್ದು ಇದೇ ಮಾರ್ಗವಾಗಿ ಪ್ರತಿನಿತ್ಯ ವಾಪಸ್ ಮತ್ತೊಂದು ಬಸ್ ಸಂಚರಿಸಲಿದೆ.

ಮಾರ್ಗದ ವಿವರ : ನೂತನ ಬಸ್ ದಾವಣಗೆರೆ ನಿಲ್ದಾಣದಿಂದ ಸಂಜೆ 5 ಗಂಟೆಗೆ ಹೊರಡಲಿದ್ದು, ಬೆಳಗ್ಗೆ 7.30ಕ್ಕೆ ಬೀದರ್ ತಲುಪಲಿದೆ. ಬೀದರ್‌ನಿಂದ ಸಂಜೆ 4.15ಕ್ಕೆ ಹೊರಟು ಬೆಳಗ್ಗೆ 7.10ಕ್ಕೆ ದಾವಣಗೆರೆ ತಲುಪಲಿದೆ. ಮಾರ್ಗದ ಅಂತರ 572 ಕಿ.ಮೀ ಇದ್ದ್ದು, ಪ್ರಯಾಣ ದರ ರೂ.834 ನಿಗದಿಪಡಿಸಿದೆ.

ಇದೇ ವಾಹನ ಉಜ್ಜಿನಿ ನಿಲ್ದಾಣದಿಂದ ಸಂಜೆ 7ಕ್ಕೆ ಹೊರಟು ಬೆಳಗ್ಗೆ 5.20ಕ್ಕೆ ಕಲಬುರಗಿ ತಲುಪಲಿದೆ. ನಂತರ ಕಲಬುರಗಿಯಿಂದ ಸಂಜೆ 6.30ಕ್ಕೆ ಹೊರಟು ಬೆಳಗ್ಗೆ 6 ಗಂಟೆಗೆ ಉಜ್ಜಿನಿ ತಲುಪಲಿದೆ. ಈ ಮಾರ್ಗವು 376 ಕಿ.ಮೀ ಅಂತರವಿದ್ದು, ಪ್ರಯಾಣ ದರ ರೂ.570 ನಿಗದಿಪಡಿಸಿದೆ.

ಬೀದರ್ ಬಸ್ ನಿಲ್ದಾಣದಿಂದ ಸಂಜೆ 4.15 ಹೊರಟು, ಬೆಳಗ್ಗೆ 6ಕ್ಕೆ ಉಜ್ಜಿನಿ ತಲುಪಲಿದೆ. ಈ ಮಾರ್ಗವು 494 ಕಿ.ಮೀ ಅಂತರವಿದ್ದು, ಪ್ರಯಾಣ ದರ ರೂ. 732 ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಕೆಎಸ್‍ಆರ್‌ಟಿಸಿ ಬಸ್ ಸೇವೆ ಪಡೆಯಲು ಸಂಸದರು ಕರೆ ನೀಡಿದ್ದಾರೆ. ಬಸ್‌ಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಕೆಎಸ್‍ಆರ್‌ಟಿಸಿ ಡಿಸಿ ಶಿವಕುಮಾರಯ್ಯ, ಮಾರ್ಗ ನಿಯಂತ್ರಣಾಧಿಕಾರಿ ಫಕ್ರುದ್ದೀನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version