ದಾವಣಗೆರೆ: ಅಮಲು ಬರುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 5 ಜನ ಆರೋಪಿತರನ್ನು ಮಾದಕ ದ್ರವ್ಯ ನಿಗ್ರಹ ಪಡೆಯ ಪೊಲೀಸ್ ಸಿಬ್ಬಂದಿಗಳು ಬಂಧಿಸಿದ್ದಾರೆ.
ಇಲ್ಲಿನ ಎಸ್.ಪಿ ಎಸ್ ನಗರದ ಶಿವಕುಮಾರ (೩೮), ಮೆಹಬೂಬ್ ನಗರದ ಅಜಿಮುದ್ದೀನ್ (೩೭), ದೇವರಾಜ ಅರಸ್ ಬಡಾವಣೆಯ ಮಹಮದ್ ಶಾರೀಕ್ (೩೫), ಚನ್ನಗಿರಿ ತಾಲ್ಲೂಕು ಹೊನ್ನೆಬಾಗಿ ಗ್ರಾಮದ ಸೈಯದ್ ಬಾಬು @ ಯೂನೂಸ್, ಚನ್ನಗಿರಿ ಪಟ್ಟಣದ ಅಬ್ದುಲ್ ಗಫರ್ @ ಆಟೋಬಾಬು (೪೮) ಬಂಧಿತ ಆರೋಪಿಗಳು. ಬಂಧಿತರಿಂದ ೧,೨೫,೫೦೪ ರೂ, ಬೆಲೆಬಾಳುವ ಅಮಲಿನ ಔಷಧಿಗಳು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು೧೨೦೦ ನಗದನ್ನು ಪೊಲಿಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ಕರ್ತವ್ಯಕ್ಕೆ ನೇಮಿಸಿದ ಪಿ.ಎಸ್.ಐ ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಗಸ್ತಿನಲ್ಲಿದ್ದಾಗ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಕಾನೂನುಬಾಹಿರವಾಗಿ, ಯಾವುದೇ ಪರವಾನಗಿ ಇಲ್ಲದೇ ಅಮಲು ಬರುವ ಔಷಧಿ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ಜು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಶರಣಬಸವೇಶ್ವರ ಭೀಮರಾವ್, ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಂಜುಂಡಸ್ವಾಮಿ, ಪಿ.ಎಸ್.ಐ ಸಾಗರ ಅತ್ತರವಾಲ, ಸಿಬ್ಬಂದಿ ಪ್ರಕಾಶ, ಷಣ್ಮುಖ, ಮಂಜುನಾಥ, ಶಿವರಾಜ್, ಗೊವಿಂದರಾಜ್, ಶ್ರೀನಿವಾಸ, ಫಕ್ರುದ್ದೀನ್, ಇಮ್ತಿಯಾಜ್, ಮಂಜುನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಅಪರಾಧ ಸ್ಥಳ ಪರಿಶೀಲನೆ ಅಧಿಕಾರಿಗಳಾದ ರಘುನಾಥ, ದೇವರಾಜ ಹಾಗೂ ದರ್ಶನ್ ಇವರು ದಾಳಿಯಲ್ಲಿ ಪಾಲ್ಗೊಂಡಿದ್ದರು.