ಚಿಕ್ಕಮಗಳೂರು ಕರ್ನಾಟಕದ ಪ್ರಸಿದ್ಧವಾದ ಜಿಲ್ಲೆ. ವರ್ವವಿಡೀ ಪ್ರವಾಸಿಗರನ್ನು ಕೈಬೀಸಿ ಕರೆಯುವ ರಾಜ್ಯದ ಪ್ರಮುಖ ಪ್ರವಾಸಿ ತಾಣ. ಕೇಂದ್ರ ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ಬಂಪರ್ ಕೊಡುಗೆಯನ್ನು ನೀಡಿದೆ.
ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಸಂಸದರು ತಮ್ಮ ಪೋಸ್ಟ್ನಲ್ಲಿ ‘ಚಿಕ್ಕಮಗಳೂರು ಜಿಲ್ಲೆಗೆ ಹೊಸ 150 ಬಿಎಸ್ಎನ್ಎಲ್ ಟವರ್ ಮಂಜೂರಾಗಿದೆ, ಇದು ರಾಜ್ಯದಲ್ಲೇ ಮೊದಲು’ ಎಂದು ಹೇಳಿದ್ದಾರೆ.
ಸಂಸದರ ಪೋಸ್ಟ್ ಹೀಗಿದೆ
- ರಾಜ್ಯಕ್ಕೆ ಒಟ್ಟು 90 ಬ್ಯಾಟರಿಗಳು ಮಂಜೂರಾಗಿದ್ದು ಅದರಲ್ಲಿ ಸಿಂಹಪಾಲು 50 ಬ್ಯಾಟರಿಗಳು ಚಿಕ್ಕಮಗಳೂರು ಜಿಲ್ಲೆಗೆ ಬಂದಿವೆ. ಇನ್ನೂ 25 ಬ್ಯಾಟರಿಗಳಿಗೆ ಬೇಡಿಕೆ ಇಟ್ಟಿದ್ದು ಅದೂ ಮಂಜೂರಾಗುವ ವಿಶ್ವಾಸವಿದೆ.
- ನಿಯಮದ ಪ್ರಕಾರ 500 ಮನೆಗಳಿಗೆ ಒಂದು ಟವರ್ ನೀಡಲಾಗುತ್ತದೆ. ಆದರೆ ಮಲೆನಾಡಿನಲ್ಲಿ ದೂರ ದೂರ ಮನೆಗಳು ಇರುವುದರಿಂದ 300 ಮನೆಗೊಂದು ಟವರ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
- ಟವರ್ಗಳಿಗೆ ವಿದ್ಯುತ್ ಸಮಸ್ಯೆ ಇದ್ದು ಮೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ವಿದ್ಯುತ್ ಸ್ಥಗಿತ ಆಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
- 217 ಟವರ್ಗಳಲ್ಲಿ ಈಗಾಗಲೇ 190 ಟವರ್ಗಳನ್ನು 4ಜಿ ದರ್ಜೆಗೇರಿಸಲಾಗಿದೆ. ಇನ್ನುಳಿದ ಟವರ್ಗಳನ್ನೂ 4ಜಿ ದರ್ಜೆಗೇರಿಸುವ ಕ್ರಮ ಕೈಗೊಳ್ಳಲಾಗಿದೆ.
- ರಾಜ್ಯದಲ್ಲೇ ಮೊದಲ ಬಾರಿಗೆ ಬಿಎಸ್ಎನ್ಎಲ್ ಟವರ್ಗೆ ಸ್ಯಾಟಲೈಟ್ ಸೌಲಭ್ಯ ಒದಗಿಸಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಭಾಗಶಃ ಟವರ್ಗಳಿಗೆ ಈ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾಗಶಃ ನೆಟ್ವರ್ಕ್ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಅದಾಗ್ಯೂ ಜನರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಬಿಎಸ್ಎನ್ಎಲ್ ಅಧಿಕಾರಿಗಳು ಹಾಗೂ ಜಿಲ್ಲೆಯ ಬಿಎಸ್ಎನ್ಎಲ್ ಸಲಹಾ ಸಮಿತಿಯ ಸದಸ್ಯರು ಕಾರ್ಯೋನ್ಮುಖರಾಗಿದ್ದಾರೆ. ಪ್ರತಿ ತಿಂಗಳು ಈ ಸಂಬಂಧ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.