ಹುಬ್ಬಳ್ಳಿ: ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹುಬ್ಬಳ್ಳಿಯಲ್ಲಿ ಸುಮಾರು ₹59 ಲಕ್ಷ ಮೌಲ್ಯದ 24 ಕೆ.ಜಿ. ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮಾಗಡಿ ಕ್ರಾಸ್ನ ವ್ಯಾಪಾರಿ ಅಶೀಷ್ಕುಮಾರ್ ಜೈನ್ ಅವರು ರಾಜಸ್ಥಾನದ ಯೋಗೇಶ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ತನ್ನ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ನಂಬಿಕೆಗೆ ಧಕ್ಕೆ ತಂದು ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯ
ಕಾರಿನಲ್ಲಿದ್ದ ಎರಡು ಬ್ಯಾಗ್ ಕಳವು: ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಮಹಾದೇವಿ ಸಿಲ್ಕ್ ಸಾರೀಸ್ ಬಟ್ಟೆ ಅಂಗಡಿ ಎದುರು ನಿಲ್ಲಿಸಿದ್ದ ಕಾರಿನಲ್ಲಿದ್ದ ಎರಡು ಬ್ಯಾಗ್ಗಳನ್ನು ಆರೋಪಿ ಕಳವು ಮಾಡಿದ್ದಾನೆ ಎನ್ನಲಾಗಿದೆ. ಆ ಬ್ಯಾಗ್ಗಳಲ್ಲಿ ಕಾಲುಗಜ್ಜೆ, ಕತ್ತಿನ ಚೈನ್, ಬ್ರಾಸ್ಲೇಟ್, ಕೈ ಕಡಗ, ಕಾಲ ಕಡಗ ಸೇರಿದಂತೆ ವಿವಿಧ ಬೆಳ್ಳಿ ಆಭರಣಗಳು ಇದ್ದವು ಎಂದು ದೂರು ನೀಡಲಾಗಿದೆ.
ತನಿಖೆ ಆರಂಭ: ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
