Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಪಯಣ: ಕನಸು ನನಸಾಗುವತ್ತ ಮೊದಲ ಹೆಜ್ಜೆ!

ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಪಯಣ: ಕನಸು ನನಸಾಗುವತ್ತ ಮೊದಲ ಹೆಜ್ಜೆ!

0

ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ನಡುವೆ ನಿತ್ಯ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಇಲ್ಲೊಂದು ಸಿಹಿ ಸುದ್ದಿ. ‘ನಮ್ಮ ಮೆಟ್ರೋ’ವನ್ನು ಬೆಂಗಳೂರಿನಿಂದ ತುಮಕೂರುವರೆಗೆ ವಿಸ್ತರಿಸುವ ಬಹುನಿರೀಕ್ಷಿತ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಈ ಮಾರ್ಗದ ವಿಸ್ತೃತ ಯೋಜನಾ ವರದಿ (DPR) ತಯಾರಿಕೆಗಾಗಿ ಇದೀಗ ಬಿಡ್ ಆಹ್ವಾನಿಸಿದೆ.

ಮೊಟ್ಟಮೊದಲ ಅಂತರಜಿಲ್ಲಾ ಮೆಟ್ರೋ: ಇದುವರೆಗೂ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ‘ನಮ್ಮ ಮೆಟ್ರೋ’, ಇದೇ ಮೊದಲ ಬಾರಿಗೆ ಅಂತರಜಿಲ್ಲಾ ಸಂಪರ್ಕ ಕಲ್ಪಿಸಲು ಮುಂದಾಗಿದ್ದು, ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ.

ಹಸಿರು ಮಾರ್ಗವನ್ನು ಬೆಂಗಳೂರಿನ ಮಾದಾವರದಿಂದ (ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ) ತುಮಕೂರುವರೆಗೆ ಬರೋಬ್ಬರಿ 59.6 ಕಿಲೋಮೀಟರ್‌ಗಳಷ್ಟು ವಿಸ್ತರಿಸುವ ಈ ಬೃಹತ್ ಯೋಜನೆಯು, ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮೇಲಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.

20,649 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಮೊದಲ ಹಂತಕ್ಕೆ ಸುಮಾರು 20,649 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಡಿಪಿಆರ್ ತಯಾರಿಕೆಗಾಗಿ ಬಿಡ್ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದ್ದು, ಐದು ತಿಂಗಳೊಳಗೆ ವರದಿಯನ್ನು ಸಿದ್ಧಪಡಿಸುವಂತೆ ಗಡುವು ನೀಡಲಾಗಿದೆ.

ಪ್ರಯಾಣಿಕರಿಗೆ ಹೇಗೆ ಅನುಕೂಲ?: ಈ ಮೆಟ್ರೋ ಮಾರ್ಗವು ಪೂರ್ಣಗೊಂಡರೆ, ಒಂದು ದಿಕ್ಕಿನಲ್ಲಿ ಪ್ರತಿ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಇದು ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ ಮತ್ತು ಇತರೆ ಕಾರಣಗಳಿಗಾಗಿ ನಿತ್ಯ ಪ್ರಯಾಣಿಸುವವರಿಗೆ ವರದಾನವಾಗಲಿದೆ. ಜೊತೆಗೆ, ನೆಲಮಂಗಲ ಮತ್ತು ದಾಬಸ್‌ಪೇಟೆಯಂತಹ ಪ್ರಮುಖ ಕೈಗಾರಿಕಾ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವುದರಿಂದ, ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ.

26 ನಿಲ್ದಾಣಗಳು: ಈ ಸಂಪೂರ್ಣ ಮಾರ್ಗವು ಎಲಿವೇಟೆಡ್ (ನೆಲದಿಂದ ಮೇಲ್ಭಾಗದಲ್ಲಿ) ಆಗಿರಲಿದ್ದು, ಒಟ್ಟು 26 ನಿಲ್ದಾಣಗಳನ್ನು ಹೊಂದುವ ಸಾಧ್ಯತೆಯಿದೆ. ಮಾದಾವರದಿಂದ ಆರಂಭವಾಗುವ ಈ ಮಾರ್ಗವು ದಾಸನಪುರ, ನೆಲಮಂಗಲ, ದಾಬಸ್‌ಪೇಟೆ, ಸೋಂಪುರ ಕೈಗಾರಿಕಾ ಪ್ರದೇಶ, ಕ್ಯಾತಸಂದ್ರ ಮೂಲಕ ಹಾದುಹೋಗಿ, ತುಮಕೂರಿನ ಪ್ರಮುಖ ಸ್ಥಳಗಳಾದ ಸಿದ್ಧಾರ್ಥ ಕಾಲೇಜು (SIT), ತುಮಕೂರು ಬಸ್ ನಿಲ್ದಾಣ ಮತ್ತು ಶಿರಾ ಗೇಟ್‌ವರೆಗೆ ತಲುಪಲಿದೆ.

ಒಟ್ಟಾರೆಯಾಗಿ ಈ ಯೋಜನೆಯು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಮಾಲಿನ್ಯವನ್ನು ತಗ್ಗಿಸಿ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಒಂದು ಹೊಸ ದಿಕ್ಕನ್ನು ತೋರಲಿದೆ. ಡಿಪಿಆರ್ ಸಿದ್ಧವಾದ ನಂತರ, ಯೋಜನೆಯ ಮುಂದಿನ ಹಂತಗಳಿಗೆ ಚಾಲನೆ ಸಿಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version