Home ನಮ್ಮ ಜಿಲ್ಲೆ ಧಾರವಾಡ ಜಾತಿ ಗಣತಿ ಹೌದೊ ಅಲ್ಲವೊ ಸರ್ಕಾರ ಸ್ಪಷ್ಟಪಡಿಸಲಿ

ಜಾತಿ ಗಣತಿ ಹೌದೊ ಅಲ್ಲವೊ ಸರ್ಕಾರ ಸ್ಪಷ್ಟಪಡಿಸಲಿ

0

ಹುಬ್ಬಳ್ಳಿ: ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಹೊರಟಿರುವುದು ಜಾತಿ ಗಣತಿ ಹೌದೊ ಅಲ್ಲವೋ ಎನ್ನುವುದು ಸ್ಪಷ್ಟವಾಗಲಿ, ಆ ವರದಿ ಪ್ರಕಟವಾದರೆ ಕೆಲವು ಸಮುದಾಯಗಳಿಗೆ ಅಸಮಾಧಾನವಾಗಲಿದೆಯಾ ಈ ಬಗ್ಗೆ ಮೊದಲು ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಬಹುದಿತ್ತು. ಚುನಾವಣೆ ಬಂತು ಅಂತ ಆ ಸಮಯದಲ್ಲಿ ಮಾಡಲಿಲ್ಲ. ಈಗ ಈ ಬಗ್ಗೆ ಮಾತನಾಡುತ್ತಾರೆ, ಅದು ಜಾತಿಗಣತಿ ಹೌದೋ ಅಲ್ಲವೊ ಅನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟತೆಯನ್ನು ನೀಡಬೇಕು. 160 ಕೋಟಿ ಖರ್ಚು ಮಾಡಿ ಜಾತಿ ಸಮೀಕ್ಷೆ ಮಾಡಿದ್ದು ಅದು ಯಾವ ಜಾತಿ ಸಮೀಕ್ಷೆ ಅನ್ನುವ ಸ್ಪಷ್ಟತೆ ಇಲ್ಲ. ಅದರ ಬಗ್ಗೆ ಸ್ಪಷ್ಟತೆಯನ್ನು ಸರ್ಕಾರ ಮೊದಲು ಕೊಡಲಿ. ವರದಿ ಆಧಾರದ ಮೇಲೆ ಸಾದಕ ಭಾದಕಗಳ ಕುರಿತು ಚರ್ಚಿಸೋಣ ಅಂತ ಕಾಂಗ್ರೆಸ್ಸಿನ ನಾಯಕರು ಹೇಳಿದ್ದಾರೆ. ಈ ಸಮೀಕ್ಷೆಯ ಫಲಶ್ರುತಿ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ‌ ಅದರ ಫಲಿತಾಂಶ ಏನಾಗುತ್ತದೆ ? ಕೆಲವು ವರ್ಗದಲ್ಲಿ ಅಸಮಾಧಾನ ಉಂಟಾಗುತ್ತಾ ಈ ಬಗ್ಗೆ ಮೊದಲು ಚರ್ಚೆಯಾಗಲಿ CWC ಯಲ್ಲಿ ಜಾತಿ ಗಣತಿ ಜಾರಿ ಮಾಡುವ ಕುರಿತು ನಿರ್ಣಯ ತೆಗೆದುಕೊಂಡಿದೆ ಅವರು ಮಾಡಲಿ ಎಂದು ಹೇಳಿದರು.

ಪ್ಯಾಲೆಸ್ಟೈನಲ್ಲಿರುವ‌ ಉಗ್ರರಿಗೆ ಕಾಂಗ್ರೆಸ್ ಬೆಂಬಲ: ಇಸ್ರೇಲ್ ಪ್ಯಾಲೆಸ್ಟಿನ್ ಯುದ್ಧ ಹಿನ್ನೆಲೆ ಕಾಂಗ್ರೆಸ್ ಪ್ಯಾಲೆಸ್ಟಿನ್ ಗೆ ಬೆಂಬಲ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಅಂತರಾಷ್ಟ್ರೀಯ ವಿಚಾರ. ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ಬಹಳ ವರ್ಷದ ಸಂಘರ್ಷ ಇದೆ. ಪ್ಯಾಲೆಸ್ಟೈನ್ ಹಮಾಸರು ಉಗ್ರವಾದಿಗಳು, ಅವರು ಪ್ಯಾಲೆಸ್ಟೈನ್ ನಾಗರಿಕರಲ್ಲ. ಅದನ್ನು ಕಾಂಗ್ರೆಸ್ ಮರೆಮಾಚಲು ಪ್ರಯತ್ನಿಸುತ್ತಿದೆ. ಪ್ಯಾಲೆಸ್ಟೈನ್ ನಲ್ಲಿರುವಂತಹ ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಭಯೋತ್ಪಾದಕರು ಒಂದೇ. ಅಮಾಯಕರು, ಹೆಣ್ಣುಮಕ್ಕಳು, ಮಕ್ಕಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತಿದೆ. ಇದನ್ನು ಯಾವುದೇ ಸಮಾಜ ಹಾಗೂ ಸಮುದಾಯ ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ತುಷ್ಟಿಕರಣದ ರಾಜಕಾರಣಕ್ಕೆ ಇಳಿಯುತ್ತಿದೆ ಇದು ದೊಡ್ಡ ದುರಂತ ಎಂದರು.
ಎಲ್ಲ ಕಾಮಗಾರಿಗಳ ತನಿಖೆ ನಡೆಸಲಿ : ನರಗುಂದ ಸೇರಿದಂತೆ ಕೆಲ ಕ್ಷೇತ್ರಗಳ ಹಿಂದಿನ ಕಾಮಗಾರಿಗಳ ತನಿಖೆ ಮಾಡಲು ಸಿಎಂ ಶಿಫಾರಸ್ಸು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನರಗುಂದ ಸೇರಿದಂತೆ ಯಾವುದೇ ಕ್ಷೇತ್ರವಾಗಲಿ, ಕಾಮಗಾರಿಗಳ ತನಿಖೆ ಮಾಡಲಿ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಎಲ್ಲ ಇಲಾಖೆ ತನಿಖೆಯಾಗಲಿ, ಬೇಡ ಅಂದವರು ಯಾರು? ಕಾಮಗಾರಿ ಎಲ್ಲವೂ ಮುಗಿದಿದೆ, ಬಿಲ್ ಗಳನ್ನು ಸಹ ಕೊಡಲಾಗಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿನ ಕಾಮಗಾರಿಗಳ ಬಿಲ್ಲನ್ನು ಸರ್ಕಾರ ಇನ್ನೂ ಕೊಟ್ಟಿಲ್ಲ. ಮೊದಲು ಬಿಲ್ಲುಗಳನ್ನು ಕೊಡಲಿ, ನಂತರ ಎಲ್ಲೆಲ್ಲಿ ತಪ್ಪುಗಳು ನಡೆದಿದೆ ಇದರ ಬಗ್ಗೆ ತನಿಖೆಯಾಗಲಿ ಎಂದರು.
ರಾಜ್ಯ ಸರ್ಕಾರಕ್ಕೆ ಕೇಂದ್ರದ ಸ್ಟ್ರೋಕ್: ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರದ ಸ್ಟ್ರೋಕ್ ಆಗಿದೆ. ಬರ ಆದರೂ ಕಾವೇರಿ ಆದರೂ ಎಲ್ಲದಕ್ಕೂ ಕೇಂದ್ರ. ಕಡೆಗೆ ಬೆರಳು ತೋರಿಸುತ್ತಾರೆ. ಈಗ ವಿದ್ಯುತ್ ಅಭಾವದ ಹಿನ್ನೆಲೆ ಕೇಂದ್ರಕ್ಕೆ ಬೊಟ್ಟು ಮಾಡುತ್ತಿದ್ದಾರೆ. ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸರಿಯಾದ ಕಲ್ಲಿದ್ದಲುಗಳನ್ನು ಒದಗಿಸಿ. ವಿದ್ಯುತ್ ಉತ್ಪಾದನೆ ಮಾಡಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ತಮ್ಮ ಹಣಕಾಸಿನ ದುಸ್ಥಿತಿಗೆ ಅಸಮರ್ಪಕ ಕೆಲಸದಿಂದ ವಿದ್ಯುತ್ ಅಭಾವ ಬಿಗಡಾಯಿಸಿದೆ. ಸರಿಯಾದ ವಿದ್ಯುತ್ತನ್ನು ಪೂರೈಸುವುದು ರಾಜ್ಯ ಸರ್ಕಾರದ ಕರ್ತವ್ಯ. ವಿದ್ಯುತ್ ಉತ್ಪಾದನೆಗೆ ಕೇಂದ್ರ ಏನು ಸಹಾಯ ಮಾಡಬೇಕು ಎಂದು ಪ್ರಶ್ನಿಸಿದರು.

Exit mobile version