ಕುಷ್ಟಗಿ: ಹೊಸಪೇಟೆ ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಹೊರಟಿದ್ದ ಕಂಟೇನರ್ ಲಾರಿಗೆ ಹಿಂಬದಿಂದ ಕಾರುಡಿಕ್ಕಿಯಾಗಿ ಸ್ಥಳದಲ್ಲಿ ಮೂರು ಜನರು ಮೃತಪಟ್ಟ ಘಟನೆ ಜರುಗಿದೆ.
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಅಮರಗುಂಡಪ್ಪ ಪೆಟ್ರೋಲ್ ಬಂಕ್ ಹತ್ತಿರ ಮುಂದೆ ಹೊರಟಿದ್ದ ಲಾರಿಗೆ ಹಿಂದೆ ಬಂದು ಕಾರ ಡಿಕ್ಕಿಯಾಗಿದ್ದು ಕೋಳೂರು ತಾಂಡದ ಕಾರ ಚಾಲಕ ಪ್ರವೀಣ್ ಕುಮಾರ್ ಭೋಜಪ್ಪ ಚವ್ಹಾಣ (೨೭), ಬಿದರಕುಂದಿ ಗ್ರಾಮದ ಗೌರಮ್ಮ ಹನುಮಂತಗೌಡ ಕನ್ನೂರ್(೬೦) ಹಾಗೂ ಮುದ್ದೆಬಾಳ್ ತಾಲೂಕಿನ ನೇಬಗೇರಿ ಗ್ರಾಮದ ಸುರೇಶ್ ಈರಸಂಗಪ್ಪ ಹಂಡರಗಲ (೪೩) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ್ ರಾಠೋಡ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರ್ ಚಾಲಕನ ದಿವ್ಯ ನಿರ್ಲಕ್ಷ್ಯ: ಜೂ.೧೨ ಮಧ್ಯರಾತ್ರಿ ಇಲಕಲ್ ಕಡೆಗೆ ಹೊರಟಿದ್ದ ಕಂಟೇನರ್ ಲಾರಿಗೆ ಹಿಂಬದಿಂದ ಹೊರಟಿದ್ದ ಕಾರಿನ ಚಾಲಕನ ದಿವ್ಯ ನಿರ್ಲಕ್ಷತನದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಲಾರಿಯ ಹಿಂಬದಿಯಲ್ಲಿ ಕಾರು ಸೇರಿಕೊಂಡಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ. ಮೃತಪಟ್ಟ ಮೂರು ಜನರ ಶವವನ್ನು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರಕ್ಕೆ ತರಲಾಗಿದೆ.