ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಟ್ಟು ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಅವನಿಗೆ ಸ್ಥಳನಿಯುಕ್ತಿ ಆದೇಶ (Order of Posting) ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ಸರ್ಕಾರ ರಾಜ್ಯಪತ್ರದಲ್ಲಿ ನಾಗರತ್ನ ವಿ.ಪಾಟಿಲ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2) ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಟ್ಟು ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಅವನಿಗೆ ಸ್ಥಳನಿಯುಕ್ತಿ ಆದೇಶ (Order of Posting) ನೀಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದ್ದು, ದಿನಾಂಕ 11.10.1989ರ ಅಧಿಕೃತ ಜ್ಞಾಪನ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ.
ಆದೇಶದ ವಿವರಗಳು: ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸ್ಥಳನಿಯುಕ್ತಿ ಆದೇಶ ಪಡೆಯದೆ, ಅಮಾನತ್ತಿನಲ್ಲಿರಿಸುವ ಪೂರ್ವದಲ್ಲಿ ಅವನು ಹೊಂದಿದ್ದ ಹುದ್ದೆಯ ಪ್ರಭಾರವನ್ನು ತಾನಾಗಿಯೇ ವಹಿಸಿಕೊಂಡಿರುವ/ ವಹಿಸಿಕೊಳ್ಳುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುತ್ತವೆ.
ಈ ಹಿನ್ನೆಲೆಯಲ್ಲಿ ಸೃಷ್ಟೀಕರಣ ನೀಡುವುದು ಅಗತ್ಯವೆಂದು ಭಾವಿಸಿದೆ. ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಹೊರಡಿಸಲಾದ ಆದೇಶವನ್ನು ಮಾನ್ಯ ನ್ಯಾಯಾಲವು ರದ್ದುಪಡಿಸಿದ ಸಂದರ್ಭದಲ್ಲಿ ಅವನಿಗೆ ಸ್ಥಳನಿಯುಕ್ತಿ ಆದೇಶ ನೀಡುವುದಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ದಿನಾಂಕ 11.10.1989ರ ಅಧಿಕೃತ ಜ್ಞಾಪನದಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗಿರುತ್ತದೆ.
ಮೇಲ್ಕಂಡ ಹಿನ್ನೆಲೆಯಲ್ಲಿ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿಯೂ ಸಹ ಉಲ್ಲೇಖಿತ ದಿನಾಂಕ:11.10.1989ರ ಅಧಿಕೃತ ಜ್ಞಾಪನದಲ್ಲಿ ನೀಡಲಾದ ಸೂಚನೆಗಳನ್ನು ಯಥಾವತ್ತಾಗಿ ಅನುಸರಿಸಿ ಕ್ರಮ ತೆಗೆದುಕೊಳ್ಳತಕ್ಕದೆಂದು ಈ ಮೂಲಕ ಸ್ಪಷ್ಟೀಕರಿಸಲಾಗಿದೆ.
ಸರ್ಕಾರದ ಎಲ್ಲಾ ಅಪರ ಮುಖ್ಯಕಾರ್ಯದರ್ಶಿ/ ಪ್ರಧಾನಕಾರ್ಯದರ್ಶಿ/ ಕಾರ್ಯದರ್ಶಿ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರಿಗಳಿಗೆ ಈ ಸೂಚನೆಗಳನ್ನು ತಿಳಿಸಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲು ಕೋರಿದೆ ಎಂದು ಆದೇಶ ತಿಳಿಸಿದೆ.