ಮ್ಯಾಂಚೆಸ್ಟರ್: ಬುಧವಾರದಿಂದ ಪ್ರಾರಂಭವಾಗಲಿರುವ ನಾಲ್ಕನೇ ಟೆಸ್ಟ್ನಲ್ಲಿ ಭಾರತದ ಅಗ್ರ ವೇಗಿ ಜಸ್ಪ್ರಿತ್ ಬುಮ್ರಾ ಹನ್ನೊಂದರ ಬಳಗದಲ್ಲಿ ಆಡುವುದನ್ನು ಇನ್ನೋರ್ವ ವೇಗಿ ಮೊಹಮ್ಮದ್ ಸಿರಾಜ್ ಖಚಿತಪಡಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯ ಇದಾಗಿದ್ದು ಆಡಿದ ಮೂರು ಪಂದ್ಯಗಳ ಪೈಕಿ ಭಾರತ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ, ಇಂಗ್ಲೆಂಡ್ ತಂಡ ಈಗಾಗಲೇ ಎರಡು ಪಂದ್ಯಗಳಲ್ಲಿ ಗೆಲುವುವನ್ನು ಕಂಡಿದ್ದು, ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋತರೆ ಸರಣಿ ಇಂಗ್ಲೆಂಡ್ ವಶವಾಗಲಿದೆ. ಹೀಗಾಗಿ ಈ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.
ಸುದ್ದಿಗೋಷ್ಠಿಯಲ್ಲಿ ಪಂದ್ಯದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ ವೇಗಿ ಮೊಹಮ್ಮದ ಸಿರಾಜ್, ಪಂದ್ಯದಲ್ಲಿ “ನನಗೆ ಗೊತ್ತಿರುವಂತೆ ಬುಮ್ರಾ ಆಡುತ್ತಾರೆ” ಎಂದು ಹೇಳಿದ್ದಾರೆ. ಇದರೊಂದಿಗೆ `ಮಾಡು-ಇಲ್ಲವೇ-ಮಡಿ’ ಪಂದ್ಯದಲ್ಲಿ ಬುಮ್ರಾ ಆಡುವ ಬಗ್ಗೆ ಇದ್ದ ಅನುಮಾನಕ್ಕೆ ತೆರೆ ಬಿದ್ದಂತಾಗಿದೆಯಲ್ಲದೇ ಆಕಾಶ ದೀಪ್ ಹಾಗೂ ಅರ್ಷದೀಪ್ ಸಿಂಗ್ ಅವರುಗಳಿಗಾದ ಗಾಯಗಳಿಂದ ಬೇಸರಗೊಂಡಿದ್ದ ಭಾರತೀಯ ಬೆಂಬಲಿಗರಿಗರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಐದು ಟೆಸ್ಟ್ಗಳ ಸರಣಿಯಲ್ಲಿ ಭಾರತ 1-2 ರಿಂದ ಹಿನ್ನಡೆದಿದ್ದು, ಸಹಜವಾಗಿ ಎಲ್ಲರ ಗಮನ ಬುಮ್ರಾ ಮೇಲೆ ಕೇಂದ್ರೀಕೃತವಾಗಿದೆ. ಟೀಂ ಮ್ಯಾನೇಜ್ಮೆಂಟ್ ಅವರನ್ನು ಪ್ರಸಕ್ತ ಸರಣಿಯಲ್ಲಿ ಕೇವಲ ಮೂರೇ ಟೆಸ್ಟ್ಗಳಲ್ಲಿ ಆಡಿಸುವ ಯೋಜನೆ ಹೊಂದಿದ್ದು, ಅವರೀಗಾಗಲೇ ಮೊದಲ ಹಾಗೂ ಮೂರನೇ ಟೆಸ್ಟ್ಗಳಲ್ಲಿ ಆಡಿದ್ದಾರೆ. ಆದರೆ, ಆ ಎರಡೂ ಟೆಸ್ಟ್ಗಳನ್ನು ಭಾರತ ಸೋತಿದ್ದು, ಸರಣಿ ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿ ಬುಮ್ರಾ ಆಡಲೇಬೇಕಿದೆ.