ಬಿಜೆಪಿ ಪ್ರತಿಭಟನೆ ಮೂಲಕ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬೆಂಬಲಿಸುತ್ತಿದೆ
ಮಂಡ್ಯ: ಸಿ.ಟಿ ರವಿ ಬಂಧನ ವಿರೋಧಿಸಿ ಕರ್ನಾಟಕ ಬಿಜೆಪಿ ಪಕ್ಷ ಪ್ರತಿಭಟನೆ ಮಾಡುವ ಮೂಲಕ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬೆಂಬಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದು ಸುಳ್ಳಾದರೆ ಅವರ ಬಂಧನವೇಕಾಯಿತು? ಸಾಮಾನ್ಯವಾಗಿ ಇಂತಹ ಆರೋಪಗಳ ಬಗ್ಗೆ ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಸಿ.ಟಿ. ರವಿಯವರು ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ. ಆದರೆ ಇದೊಂದು ಗಂಭೀರ ಸ್ವರೂಪದ ಅಪರಾಧ.
ಸಿ.ಟಿ.ರವಿಯವರು ತಾವು ‘ಪ್ರಸ್ಟ್ರೇಷನ್’ ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವೆಂದು ಸಚಿವರು ಹೇಳಿದ್ದಾರೆ. ಕೀಳು ಪದಬಳಕೆಯನ್ನು ಕೇಳಿರುವುದಾಗಿ ಅಲ್ಲಿಯೇ ಇದ್ದ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು, ಪದಬಳಕೆಯಾಗಿರುವುದು ಸತ್ಯ.
ಸಿ.ಟಿ ರವಿಯವರು ಎಸಗಿರುವ ಅಪರಾಧ ಕೃತ್ಯಕ್ಕೆ ಅನುಗುಣವಾಗಿ ಕಾನೂನಿನ ಕ್ರಮ ಜರುಗಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಜನರ ಆಕ್ರೋಶದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು ಎಂದರು