ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಂಸದೀಯ ಮಂಡಳಿ ಶಿಫಾರಸ್ಸು ಮಾಡಿರುವ ಈ ತಿದ್ದುಪಡಿಯನ್ನು ಮಸೂದೆಗೆ ಸೇರಿಸುವ ಮೂಲಕ ಬಜೆಟ್ ಅಧಿವೇಶನದ ಉತ್ತರಾರ್ಧದಲ್ಲಿ ಮಸೂದೆಯನ್ನು ಸನದಲ್ಲಿ ಮಂಡಿಸಿ, ಚರ್ಚಿಸಿ ಅನುಮೋದನೆ ನಡೆಯಲು ಹಾದಿ ಸುಗಮಗೊಂಡಂತಾಗಿದೆ. ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಶಿಫಾರಸ್ಸು ಮಾಡಿರುವ ಬಹುತೇಕ ಎಲ್ಲ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಹಾಗೂ ಭಾರತೀಯ ಬಂದರು ಮಸೂದೆಯ ಜತೆಗೆ ಕಳೆದ ವಾರ ಈ ಮಸೂದೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಸರ್ಕಾರ ಈ ಮಸೂದೆಯನ್ನು ಆದ್ಯತೆಯ ಪಟ್ಟಿಯಲ್ಲಿ ಸೇರಿಸಿದೆ. ಫೆಬ್ರವರಿ 13 ರಂದು ಜಂಟಿ ಸಂಸದೀಯ ಸಮಿತಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿತ್ತು. ಇದನ್ನು ಈಗ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಸಂಸತ್ನಲ್ಲಿ ಮಸೂದೆ ಮಂಡಿಸುವಾಗ ವಿಪಕ್ಷಗಳು ಸಭಾತ್ಯಾಗ ನಡೆಸಿ ತಮ್ಮ ವಿರೋಧ ಸೂಚಿಸಿದ್ದವು.
ಕಳೆದ ವಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಈಗ ತಿದ್ದುಪಡಿ ಮಾಡಲಾದ ಕಾಯಿದೆ ಪ್ರಕಾರ ವಕ್ಫ್ ಆಸ್ತಿ ನೋಂದಣಿಯನ್ನು ಇನ್ನಷ್ಟು ಸುಗಮಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿ ಈಗ ಇರುವ ವಕ್ಫ್ ಕಾನೂನಿಗೆ ಕೆಲವೊಂದು ತಿದ್ದುಪಡಿ ಸೂಚಿಸಿದೆ. ಅದನ್ನು ಈಗ ಕೇಂದ್ರ ಸಂಪುಟ ಅಂಗೀಕರಿಸಿದೆ. ಈ ಮೂಲಕ ವಕ್ಫ್ ತಿದ್ದುಪಡಿ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಂತಾಗಿದೆ.