ರಾಯಚೂರು: ಬಿಜೆಪಿಯಲ್ಲಿ ಕೆಲವರು ಮನಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದು, ಮೊದಲು ಅದನ್ನು ಬಂದ್ ಮಾಡಬೇಕು ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ತಿಳಿಸಿದರು.
ಸ್ಥಳೀಯ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಇತ್ತೀಚೆಗೆ ಕೆಲವರು ನೀಡುತ್ತಿರುವ ಹೇಳಿಕೆಗಳಿಂದಾಗಿ ಪ್ರತಿ ಜಿಲ್ಲೆಯ ಕಾರ್ಯಕರ್ತರು ಬೇಸರಗೊಳ್ಳುತ್ತಿದ್ದಾರೆ. ಪಕ್ಷ ಕಟ್ಟಿರುವವರ ಬಗ್ಗೆ ಹಾಗೂ ರಾಜ್ಯಾಧ್ಯಕ್ಷರ ಕುರಿತು ಮಾತನಾಡುವುದು, ಅವರನ್ನು ನಿಂದಿಸುವುದು ಸರಿಯಲ್ಲ, ಮೊದಲು ಇದೆಲ್ಲವೂ ನಿಲ್ಲಬೇಕು. ಆ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕ ರು ಕ್ರಮ ವಹಿಸುವಂತೆ ಒತ್ತಡ ಹೇರಲಾಗಿದೆ ಎಂದರು.
ಪಕ್ಷದಲ್ಲಿನ ಆಂತರಿಕ ಸಂಘರ್ಷವನ್ನು ಬೇರೆ ಪಕ್ಷಗಳು ಲಾಭ ಪಡೆಯಬಾರದು. ಇಲ್ಲವಾದರೆ ಪಕ್ಷದಲ್ಲಿ ದೊಡ್ಡ ಸಮಸ್ಯೆ ಉದ್ಭವಿಸುತ್ತದೆ. ಒಗ್ಗಟ್ಟಿನಿಂದ ನಿಂತು ಪಕ್ಷ ಬಲಿಷ್ಠವಾಗಿರುವಂತೆ ಎಲ್ಲರು ನೋಡಿಕೊಳ್ಳಬೇಕು. ಆ ರೀತಿಯಾಗಿ ಎಲ್ಲರೂ ನಡೆದುಕೊಳ್ಳಬೇಕು. ಪಕ್ಷಕ್ಕೆ ಶಿಸ್ತು ಇದೆ ಅದನ್ನು ಎಲ್ಲರೂ ಪಾಲನೆ ಮಾಡಬೇಕು ಅದು ನಮ್ಮ ಕರ್ತವ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.