ಕಲಬುರಗಿ: ಬಜೆಟ್ ಪ್ರತಿಯನ್ನು ಸಚಿವ ಜಮೀರ್ ಖಾನ್ ಬರೆದು ಕೊಟ್ಟಿದ್ದಾರೆಂದು ಕೇಂದ್ರ ಬಿಜೆಪಿ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಜೋಶಿಗೆ ಬರೀ ಹಿಂದೂ-ಮುಸ್ಲಿಂ ಹೇಳುವುದೇ ಚಾಳಿ ಆಗಿದೆ. ಇವರಿಗೆ ಮುಸ್ಲಿಂರನ್ನು ಬೈಯ್ಯುವುದೇ ಕೆಲಸವಾಗಿ ಬಿಟ್ಟಿದೆ, ನಾವೆಲ್ಲ ಹಿಂದೂ ಒಂದು ಎಂದು ಹೇಳುತ್ತಾರೆ, ಅವರೇನೂ ಕೊಡುಗೆ ಕೊಟ್ಟಿಲ್ಲ, ನಾವೇ ಹಿಂದೂ ಅರ್ಚಕರಿಗೆ 12 ಸಾವಿರ ಕೊಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿಗೂ ಮೀರಿ ಮಂಡಿಸಿದ ಬಜೆಟ್ ಐತಿಹಾಸಿಕವಾಗಿದ್ದು, ಇದರಲ್ಲಿ ಎಲ್ಲಾ ವರ್ಗಕ್ಕೂ ಅನುದಾನವನ್ನು ಸಮತೋಲನವಾಗಿ ಹಂಚಿದ್ದಾರೆ ಎಂದರು.
ಹೆಣ್ಣು ಕುಟುಂಬದ ಕಣ್ಣು ಎಂಬ ಮಾತಿನಂತೆ ಹೆಣ್ಣಿಗೆ ಅತಿ ಹೆಚ್ಚು ಶಕ್ತಿ ಕೊಡುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ, ಆಶಾ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಗೌರವಧನ ಹೆಚ್ಚಿಸಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೊಡುವುದಾಗಿ ಹೇಳಿದ್ದೇವೆ, ಅದರ ಅನುಗುಣವಾಗಿ ಕೊಟ್ಟಿದ್ದೇವೆ, ಇಂದು ‘ಕಲ್ಯಾಣ ಪಥ’ ರಸ್ತೆ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಜೇವರ್ಗಿಯಲ್ಲಿ ಮಾಡುತ್ತಿದ್ದೇವೆ. 22 ಸಾವಿರ ಕೋಟಿ ನೀರಾವರಿಗೆ ಅನುದಾನ ಕೊಟ್ಟಿದ್ದು,
ತುಂಗಭದ್ರಾ 25 ರಿಂದ 30 ಟಿಎಂಸಿ ನೀರು ವ್ಯತ್ಯಯವಾಗುತ್ತಿದೆ, ಅದರ ಬಳಕೆಯ ಕುರಿತಾಗಿ ತೆಲಂಗಾಣ, ಆಂಧ್ರಪ್ರದೇಶ ಸಿಎಂ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳಲಿದ್ದೇವೆ. ಈಗಾಗಲೇ ಆಫೀಶಿಯಲ್ ಆಗಿ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಹೇಳಿದರು.
ತೊಗರಿ ಬೆಳೆ ಪರಿಹಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ತೊಗರಿ ಬೆಳೆ ಹಾನಿಯಾಗಿರುವ ಕುರಿತು ಅರ್ಜಿ ಕೊಟ್ಟಿದ್ದಾರೆ, ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ನೀಡುವ ಕಾರ್ಯ ಮಾಡಲಿದ್ದೇವೆ, ರೈತರನ್ನು ನಮ್ಮ ಸರಕಾರ ವಿಶೇಷ ಕಾಳಜಿಯಿಂದ ನೋಡುತ್ತದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ 500 ಮಾದರಿ ಶಾಲೆಗಳನ್ನು ಪ್ರಾರಂಭಿಸಿದ್ದೇವೆ, ಹೊಸ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಿದ್ದೇವೆ. ಹೀಗೆ ನಮಗೆ ಹಿಂದೂ ಮುಸ್ಲಿಂ, ಕ್ರೈಸ್ತ ಮತವಬಾoಧವರು ಎಲ್ಲರೂ ಒಂದೇ ಎಂದು ಭಾವಿಸುತ್ತೇವೆ ವಿನಃ; ಬಿಜೆಪಿಯಂತೆ ನಾವು ಪ್ರತ್ಯೇಕತೆ ಮಾಡಲ್ಲ ಎಂದರು.
ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಇದ್ದರು.
