ಬೆಂಗಳೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟದ ಗಲಭೆಗೆ ಯಾರು ಕಾರಣ ಎಂದು ಸರ್ಕಾರ ಜನಸಾಮಾನ್ಯರಿಗೆ ಉತ್ತರಿಸಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ಅನ್ಯ ಕೋಮಿನವರು ಕಲ್ಲು ತೂರಾಟ ಮಾಡಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮತ್ತೊಂದು ಉದಾಹರಣೆ.
ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿಕಟ್ಟಬೇಕಾಗಿದ್ದ ಸರ್ಕಾರ ಮತ್ತೊಮ್ಮೆ ತನ್ನ ಅಸಹಾಯಕತೆ ಹಾಗೂ ಅಸಮರ್ಥತೆ ತೋರಿಸಿದೆ. ಮೂಟೆಗಟ್ಟಲು ಕಲ್ಲು ದಾಳಿಕೋರರಿಗೆ ಹೇಗೆ ಸಿಕ್ಕವು, ಇದನ್ನು ಕೊಟ್ಟಿದ್ದು ಯಾರು ಈ ಕೋಮು ಗಲಭೆಗೆ ಯಾರು ಕಾರಣ ಎಂದು ಸರ್ಕಾರ ಜನಸಾಮಾನ್ಯರಿಗೆ ಉತ್ತರಿಸಬೇಕು.
ಹಾಗೆಯೇ, ಈ ಗಲಭೆಗೆ, ಕಲ್ಲುತೂರಾಟಕ್ಕೆ ಕಾರಣರಾದ ಮತಾಂಧರನ್ನು ಮುಂದಿನ 24 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಬೇಕು ಎಂದಿದ್ದಾರೆ.