ದಾವಣಗೆರೆ: ಕೇವಲ ಒಂದೆರಡು ನಿಮಿಷ ಬೀಸಿದ ಬಿರುಗಾಳಿಗೆ ದೇವನಗರಿ ಜನತೆ ಒಂದು ಕ್ಷಣ ತಲ್ಲಣಗೊಂಡರು. ಬೈಕ್ ಸವಾರರು ಬೀಸಿದ ಗಾಳಿಯ ರಭಸಕ್ಕೆ ರಸ್ತೆಯಲ್ಲಿದ್ದ ಧೂಳು
ಕಣ್ಣಿಗೆ ರಾಚಿ ತೊಂದರೆ ಅನುಭವಿಸಿದರು.
ಬೆಳಗ್ಗೆಯಿಂದಲೇ ರಣ ಬಿಸಿಲು ಜನರನ್ನು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತೆ ಮಾಡಿತ್ತು. ಸಂಜೆ ೫ ಗಂಟೆ ಸುಮಾರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಬಳಿಕ ದಿಢೀರ್ ಬೀಸಿದ ಬಿರುಗಾಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು,
ಅಂಗಡಿ-ಮುಂಗಟ್ಟುಗಳಲ್ಲಿ ಕೆಲಸ ಮಾಡುತ್ತಿದ್ದ ಮಾಲೀಕರನ್ನು ದಂಗು ಬಡಿಸಿತು.
ಒಂದು ಕ್ಷಣದಲ್ಲಿ ಬೀಸಿದ ಗಾಳಿಗೆ ರಸ್ತೆಯಲ್ಲಿ ಇದ್ದ ಕಸ-ಕಡ್ಡಿ, ಧೂಳು, ಪ್ಲಾಸ್ಟಿಕ್ ಕವರ್ಗಳು ವಾಹನಗಳ ಸವಾರರು, ಪಾದಚಾರಿಗಳ ಮೇಲೆ ರಾಚಿದವು. ಒಮ್ಮೆಲೇ ಬೀಸಿದ ಗಾಳಿಯಿಂದ ಧೂಳು
ಕಣ್ಣಿಗೆ ರಾಚಿ, ಕೆಲವು ಬೈಕ್ ಸವಾರರು ರಸ್ತೆ ಬದಿಗೆ ಬೈಕ್ ನಿಲ್ಲಿಸಿ ಕಣ್ಣಿಗೆ ಬಿದ್ದ ಧೂಳು ತೆಗೆದುಕೊಳ್ಳಲು ನಿಂತಿದ್ದರು. ಅಲ್ಲದೇ ಬೀಸಿದ ಗಾಳಿಯ ರಭಸಕ್ಕೆ ರಸ್ತೆ ಬದಿಗಳಲ್ಲಿದ್ದ ಮರಗಳ ಎಲೆಗಳು, ಒಣಗಿದ ರಂಬೆ-ಕೊಂಬೆಗಳು, ರಸ್ತೆಗಳಲ್ಲಿ ಬಿದ್ದು ವಾಹನಗಳ ಸಂಚಾರಕ್ಕೆ ಸ್ವಲ್ಪವೊತ್ತು ಅಡ್ಡಿಯುಂಟು ಮಾಡಿದವು.