ಮಂಗಳೂರು: ಸಿದ್ಧರಾಮಯ್ಯ ಸರಕಾರ ಕೊಲೆಗಳ ಸರಕಾರವಾಗಿದೆ. ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳು ಕಳೆಯುವುದರೊಳಗೆ ಹತ್ತಾರು ಕೊಲೆಗಳು ನಡೆದಿವೆ. ಜೈನ ಮುನಿ ಸೇರಿದಂತೆ ಎಲ್ಲರ ಹತ್ಯೆಗಳೂ ನಡೆಯಲು ಆರಂಭವಾಗಿದ್ದು, ರೈತ ವಿರೋಧಿ ನೀತಿಯಿಂದಾಗಿ ರೈತರೂ ಸರಕಾರದ ವಿರುದ್ಧ ಅಸಮಾಧಾನದಲ್ಲಿದ್ದಾರೆ ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈನ ಮುನಿ ಹತ್ಯಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸತ್ಯಧೋಧನೆ ನಡೆಸಲಾಗಿದೆ. ಮುನಿಯನ್ನು ಭೀಕರವಾಗಿ ಕೊಲೆ ನಡೆಸಲಾಗಿದೆ. ಮೈಸೂರಿನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಸಿ.ಟಿ.ರವಿ ನೇತೃತ್ವದಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ಕೊಲೆಗಳನ್ನೂ ರಾಜ್ಯ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ನಡೆಸುವ ಚರ್ಚೆ ಈವರೆಗೂ ನಡೆದಿಲ್ಲ. ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ನಡೆಸುತ್ತಿದೆ. ಆದರೆ ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಕುರಿತ ಚರ್ಚೆ ನಡೆದಿಲ್ಲ ಈ ಎಲ್ಲಾ ಚರ್ಚೆಗಳು ಜನವರಿ- ಫೆಬ್ರವರಿ ತಿಂಗಳ ಬಳಿಕ ನಡೆಯುವ ಸಾಧ್ಯತೆ ಇದೆ ಎಂದರು.
ವಿಧಾನಸಭಾ ವಿರೋಧಪಕ್ಷ ನಾಯಕನ ಆಯ್ಕೆಯನ್ನು ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ಮಾಡಲಿದ್ದಾರೆ. ಬಿಜೆಪಿಯ ೬೨ ಶಾಸಕರೂ ಸಮರ್ಥರಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯಿಂದ ಬಂಡಾಯ ಎದ್ದಿರುವ ಅರುಣ್ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿ ನಡೆದ ಮಾತುಕತೆಯ ಕುರಿತ ಪ್ರಶ್ನೆಗೆ, ಬಿಜೆಪಿ ರಾಷ್ಟ್ರೀಯ ಪಕ್ಷ. ಈ ಕುರಿತು ರಾಷ್ಟ್ರೀಯ ನಾಯಕರ ಜತೆ ಚರ್ಚೆಗಳಾಗಿದ್ದು, ರಾಷ್ಟ್ರೀಯ ನಾಯಕರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.
