Home ನಮ್ಮ ಜಿಲ್ಲೆ ಉತ್ತರ ಕನ್ನಡ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ : ಡಾ. ಸಿ.ಇ ರಂಗಸ್ವಾಮಿ

ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ : ಡಾ. ಸಿ.ಇ ರಂಗಸ್ವಾಮಿ

0

ದಾಂಡೇಲಿ : ನಗರಸಭೆಗಳು ,ಪುರಸಭೆ, ಸೇರಿದಂತೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಸಮಿತಿಯ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಡಾ. ಸಿ.ಇ ರಂಗಸ್ವಾಮಿ ಹೇಳಿದ್ದಾರೆ.

ಕಾರವಾರದ ಸರ್ಕಾರಿ ಅಧೀನದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಕಿರುಕುಳ ನೀಡುತ್ತಿದ್ದಾರೆ.

ಸರಕಾರದ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವಂತಿಲ್ಲ. ಆದರೆ ವ್ಯಾಪಾರ ಮಾಡುವ ಸ್ಥಳದಲ್ಲಿ ಅವರ ಹೂ, ಹಣ್ಣ ಬುಟ್ಟಿಗಳನ್ನು ಬಿಸಾಡುತ್ತಿದ್ದಾರೆ. ಈ ಮೂಲಕ ಸರಕಾರದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ತೆರದ ಬಳಿಕ ಗುರುತಿನ ಚೀಟಿ ಹಾಗೂ ಅವರಿಗೆ ಜಾಗ ನಿಗದಿಯಾಗುತ್ತದೆ. ಅದರ ಬಳಿಕವೇ ಸ್ಥಳಾಂತರ ಮಾಡಬೇಕು. ಆದರೆ ಕಾರವಾರದಲ್ಲಿ ಈ ರೀತಿ ಆಗಿಲ್ಲ.

ಬೀದಿ ಬದಿ ವ್ಯಾಪಾರಿಗಳ ಸಮಿತಿಯಿಂದ ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು. ಆದರೆ ಕಾರವಾರದಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಬೀದಿ ಬದಿ ವ್ಯಾಪಾರಿ ಎಂದು ನೊಂದಣಿಯಾದವರು ಪೊಲೀಸ್ ತಪಾಸಣೆ ನಡೆಯಬೇಕು. ಹೊರ ಜಿಲ್ಲೆಯವರಿಗೆ ಗುರುತಿನ ಚೀಟಿ ನೀಡಬಾರದು ಎಂದರು.

ನಗರಸಭೆಯಿಂದ ಮೇಳ ಆಯೋಜಿಸಿ ಸ್ವಚ್ಚತೆ, ಆರೋಗ್ಯ ಹಾಗೂ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಆದರೆ ಈ ನಿಯಮಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಅನುಸರಿಸುತ್ತಿಲ್ಲ. ಬೀದಿಬದಿ ವ್ಯಾಪಾರಿಗಳ ಮೇಲೆ ಈ ರೀತಿಯ ಕಿರುಕುಳ ಮುಂದುವರೆದರೆ ಹೈಕೋರ್ಟನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದರು.

ಸಮಿತಿಯ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಕಾವ್ಯಶ್ರೀ ಕೆ.ಎಸ್, ಜಿಲ್ಲಾದ್ಯಕ್ಷ ಫಕೀರಪ್ಪಾ ಭಂಡಾರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾಜ್ ಆರ್, ಹಬೀಬಿ, ಕಾರವಾರ ಬ್ಲಾಕ್ ಅಧ್ಯಕ್ಷ ಮುಸ್ತಾಕ್, ಜೀವನ ಆರ್ ಪೊಕಳೆ ಹಾಗೂ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version