ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಧರ್ಮ ಧ್ವಜಾರೋಹಣ ಮಾಡಿದ ಎರಡು ದಿನಗಳ ನಂತರವೇ ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿ ಕೃಷ್ಣನಗೇರಿಗೆ ಆಗಮಿಸುತ್ತಿದ್ದಾರೆ. ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ವಿಶ್ವಪರ್ಯಾಯ ಮಹೋತ್ಸವದ ಅಂಗವಾಗಿ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪ್ರಧಾನಿ ಮೋದಿ ವಿಶೇಷವಾಗಿ ಸಾಕ್ಷಿಯಾಗುತ್ತಿದ್ದಾರೆ.
ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಒಟ್ಟಾಗಿ ಗೀತೆಯ ಪಠಣ ಮಾಡುವ ಈ ಅಪೂರ್ವ ಕಾರ್ಯಕ್ರಮದಲ್ಲಿ ಮೋದಿ ಸ್ವತಃ ಗೀತೆಯ 15ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಗೀತಾರಹಸ್ಯದಲ್ಲಿ 15ನೇ ಅಧ್ಯಾಯಕ್ಕೆ ವಿಶಿಷ್ಟ ಸ್ಥಾನವಿದ್ದು, ಅದರ ಪರಬ್ರಹ್ಮ ಸ್ವರೂಪವಿವರಣೆ ಶ್ಲೋಕಗಳಿಗೆ ಪ್ರಧಾನಿ ಪಠಣದ ಗೌರವ ನೀಡುವರು.
ಪ್ರಧಾನಿ ಮೋದಿ – ಉಡುಪಿ ಕಾರ್ಯಕ್ರಮ ವೇಳಾಪಟ್ಟಿ
ಬೆಳಗ್ಗೆ 11:05 – ಮಂಗಳೂರಿಗೆ ಆಗಮನ
11:15 – ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ
11:30 – ಉಡುಪಿಯ ಹೆಲಿಪ್ಯಾಡ್ಗೆ ಆಗಮನ
ರೋಡ್ ಶೋ: 11:40 – 12:00 – ಬನ್ನಂಜೆ ವೃತ್ತದಿಂದ ಕಲ್ಸಂಕ ಜಂಕ್ಷನ್ವರೆಗೆ ಭವ್ಯ ರೋಡ್ ಶೋ
ಮಠದ ಕಾರ್ಯಕ್ರಮಗಳು: 12:00 PM – ಶ್ರೀ ಕೃಷ್ಣ ಮಠಕ್ಕೆ ಭೇಟಿ. ಸ್ವರ್ಣಲಿಪ್ತ ತೀರ್ಥ ಮಂಟಪವನ್ನು ಮೋದಿಯಿಂದ ಉದ್ಘಾಟನೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ ಪೂರ್ಣ. ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ
ಲಕ್ಷ ಕಂಠ ಗೀತಾ ಪಾರಾಯಣ: 1:00 PM – ಲಕ್ಷಾಂತರ ಭಕ್ತರೊಂದಿಗೆ ಮಹಾ ಗೀತಾ ಪಠಣ.
ಉಡುಪಿಗೆ ಆಗಮಿಸುವ ಮುನ್ನ, ಮೋದಿ ಕನ್ನಡದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ. “ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಗಿರುವ ಅವಕಾಶ ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ವಿಶೇಷ ಕಾರ್ಯಕ್ರಮ ಇದು. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತ ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅಪರೂಪದ ಸ್ಥಾನ ಹೊಂದಿದೆ.”
ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕ ಪ್ರವೇಶ ತಾತ್ಕಾಲಿಕ ನಿಷೇಧವಿದೆ.
