Home ನಮ್ಮ ಜಿಲ್ಲೆ ಶಿವಮೊಗ್ಗ ITI: ಉದ್ಯೋಗ ಸಂಜೀವಿನಿ ಐಟಿಐಗೆ ಸಂಕಷ್ಟ; 6 ವರ್ಷದಲ್ಲಿ 602 ಕಾಲೇಜಿಗೆ ಬೀಗ!

ITI: ಉದ್ಯೋಗ ಸಂಜೀವಿನಿ ಐಟಿಐಗೆ ಸಂಕಷ್ಟ; 6 ವರ್ಷದಲ್ಲಿ 602 ಕಾಲೇಜಿಗೆ ಬೀಗ!

0

ITI: ಒಂದು ಕಾಲದಲ್ಲಿ ಬಡವರ ಮತ್ತು ಮಧ್ಯಮ ವರ್ಗದವರ ಪಾಲಿಗೆ ‘ಉದ್ಯೋಗ ಸಂಜೀವಿನಿ’ ಎಂದೇ ಕರೆಯಲ್ಪಡುತ್ತಿದ್ದ ಐಟಿಐ (ಕೈಗಾರಿಕಾ ತರಬೇತಿ ಸಂಸ್ಥೆ)ಗಳ ಸ್ಥಿತಿ ಇಂದು ಚಿಂತಾಜನಕವಾಗಿದೆ.

ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಐಟಿಐ ಸೇರುವವರ ಸಂಖ್ಯೆ ಕುಸಿಯುತ್ತಿದ್ದು, ಕಳೆದ 6 ವರ್ಷಗಳಲ್ಲಿ ಬರೋಬ್ಬರಿ 602 ಕಾಲೇಜುಗಳು ಮುಚ್ಚಲ್ಪಟ್ಟಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಸುವರ್ಣ ಯುಗ ಕಳೆದುಕೊಂಡ ಐಟಿಐ: 1960 ರಿಂದ 1980ರ ದಶಕದಲ್ಲಿ ಐಟಿಐ ಅಥವಾ ಡಿಪ್ಲೊಮಾ ಮಾಡಿದರೆ ಸಾಕು, ಸರ್ಕಾರಿ ಕೆಲಸ ಗ್ಯಾರಂಟಿ ಎಂಬ ಕಾಲವಿತ್ತು. ಭದ್ರಾವತಿ, ಬೆಂಗಳೂರು, ಕೆಜಿಎಫ್‌ನಂತಹ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಪಡೆಯಲು ಮುಗಿಬಿದ್ದು ಐಟಿಐ ಸೇರುತ್ತಿದ್ದರು.

2015ರವರೆಗೂ ಎಷ್ಟರಮಟ್ಟಿಗೆ ಬೇಡಿಕೆ ಇತ್ತೆಂದರೆ, ಶೇ.80 ಅಂಕ ಪಡೆದವರಿಗೂ ಸೀಟು ಸಿಗುವುದು ಕಷ್ಟವಿತ್ತು. ಆದರೆ, ಕೋವಿಡ್ ನಂತರದ ದಿನಗಳಲ್ಲಿ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಈಗ ಎಷ್ಟೇ ಕಡಿಮೆ ಅಂಕವಿದ್ದರೂ ನೇರ ಪ್ರವೇಶ ಸಿಗುತ್ತಿದ್ದರೂ, ಕಾಲೇಜಿನ ಮೆಟ್ಟಿಲು ಹತ್ತಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

ಯಾಕಿಂಗೆ ಆಸಕ್ತಿ ಕಡಿಮೆ?: ಯುವಜನತೆ ಐಟಿಐನಿಂದ ದೂರ ಉಳಿಯಲು ಪ್ರಮುಖ ಕಾರಣ ‘ವೈಟ್ ಕಾಲರ್’ ಉದ್ಯೋಗದ ಮೇಲಿನ ವ್ಯಾಮೋಹ. ಪೋಷಕರು ತಮ್ಮ ಮಕ್ಕಳು ಡಿಗ್ರಿ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ಅಧಿಕಾರಿಯಾಗಲಿ ಅಥವಾ ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡಲಿ ಎಂದು ಬಯಸುತ್ತಿದ್ದಾರೆ.

ಐಟಿಐ ಮಾಡಿದರೆ ಕೇವಲ ವೆಲ್ಡಿಂಗ್, ಫಿಟ್ಟಿಂಗ್ ನಂತಹ ದೈಹಿಕ ಶ್ರಮದ ಕೆಲಸವನ್ನೇ ಮಾಡಬೇಕಾಗುತ್ತದೆ ಎಂಬ ಮನೋಭಾವನೆ ಯುವಜನರಲ್ಲಿ ಬೇರೂರಿದೆ. ಪರಿಣಾಮವಾಗಿ, ವೆಲ್ಡರ್, ಟರ್ನರ್, ಮೋಟಾರ್ ಮೆಕ್ಯಾನಿಕ್ ಟ್ರೇಡ್‌ಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಕೇವಲ ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಾನಿಕ್ ವಿಭಾಗಗಳಿಗೆ ಅಲ್ಪಸ್ವಲ್ಪ ಬೇಡಿಕೆ ಉಳಿದುಕೊಂಡಿದೆ.

ಕೆಲಸವಿದೆ ಜನರಿಲ್ಲ!: ವಿಪರ್ಯಾಸವೆಂದರೆ, ಕೈಗಾರಿಕಾ ವಲಯದಲ್ಲಿ ಇಂದಿಗೂ ಕುಶಲಕರ್ಮಿಗಳಿಗೆ (Skilled Workers) ಭಾರೀ ಬೇಡಿಕೆಯಿದೆ. ಖಾಸಗಿ ಕಂಪನಿಗಳು ತರಬೇತಿ (Apprenticeship) ನೀಡಿ ಕೆಲಸ ಕೊಡಲು ತಯಾರಿದ್ದರೂ, ಅಲ್ಲಿಗೆ ಹೋಗಲು ಅಭ್ಯರ್ಥಿಗಳೇ ಸಿಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 97 ಸಾವಿರ ಐಟಿಐ ಸೀಟುಗಳ ಲಭ್ಯತೆ ಇದ್ದರೆ, ಭರ್ತಿಯಾಗುತ್ತಿರುವುದು 70 ಸಾವಿರಕ್ಕಿಂತಲೂ ಕಡಿಮೆ.

ಸರ್ಕಾರದ ಪ್ರಯತ್ನ ಏನಿದೆ?: ಇಲಾಖೆಯು 1500 ಕಿರಿಯ ತರಬೇತಿ ಅಧಿಕಾರಿಗಳನ್ನು (JTO) ನೇಮಿಸಿಕೊಂಡು, ತಂತ್ರಜ್ಞಾನಕ್ಕೆ ತಕ್ಕಂತೆ ಸಿಲಬಸ್ ಅಪ್‌ಗ್ರೇಡ್ ಮಾಡುತ್ತಿದೆ. ಆದರೂ, ಸಾಂಪ್ರದಾಯಿಕ ಪದವಿಗಳ ಮೇಲಿನ ಮೋಹದಿಂದಾಗಿ ತಾಂತ್ರಿಕ ಕೌಶಲ್ಯ ಕಲಿಸುವ ಐಟಿಐಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇದು ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಯಂತ್ರಗಳನ್ನು ಸರಿಪಡಿಸುವ ನುರಿತ ಕೆಲಸಗಾರರ ಕೊರತೆ ರಾಜ್ಯವನ್ನು ಕಾಡುವುದು ಖಂಡಿತ.

NO COMMENTS

LEAVE A REPLY

Please enter your comment!
Please enter your name here

Exit mobile version