ರಾಯಚೂರು: ಯರಮರಸ್ ಬೈಪಾಸ್ನಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ–ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪ್ರದೇಶದಲ್ಲಿ ಶೋಚನೀಯ ವಾತಾವರಣ ನಿರ್ಮಿಸಿದೆ.
ಮೃತರನ್ನು ಯರಮರಸ್ ಗ್ರಾಮದ ಮೇಸ್ತ್ರಿ ನಾಗಪ್ಪ ಉಪ್ಪಾರ (65) ಮತ್ತು ಅವರ ಮಗ ರಮೇಶ ಉಪ್ಪಾರ (38) ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳೀಯರು ಧಾವಿಸಿ ನೋಡಿದ ದೃಶ್ಯಗಳು ಹೃದಯ ವಿದ್ರಾವಕವಾಗಿದ್ದವು.
ಹೇಗೆ ಸಂಭವಿಸಿತು ದುರಂತ?: ಲಿಂಗಸುಗೂರು ರಸ್ತೆ ಮಾರ್ಗದಿಂದ ವೇಗವಾಗಿ ಬರುತ್ತಿದ್ದ ಲಾರಿ, ಯರಮರಸ್ ತಿರುವಿನಲ್ಲಿ ಬದಿ ನಿಂತಿದ್ದ ತಂದೆ-ಮಗನ ಮೇಲೆ ನೇರವಾಗಿ ಹರಿದುಬಿದ್ದಿದೆ. ಲಾರಿ ಹೈದರಾಬಾದ್ ದಿಕ್ಕಿಗೆ ತೆರಳುತ್ತಿತ್ತು ಎನ್ನಲಾಗಿದೆ. ವೇಗದ ಪರಿಣಾಮ ಇಬ್ಬರ ದೇಹಗಳು ಛಿದ್ರಗೊಂಡಿರುವುದು ಪತ್ತೆಯಾಗಿದೆ.
ಚಾಲಕ ಪರಾರಿ: ಅಪಘಾತದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಡಂಬಾಳ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.
ಅಪಘಾತದ ಸುದ್ದಿ ತಿಳಿದು ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು. ಬೈಪಾಸ್ ರಸ್ತೆಯಲ್ಲಿ ವೇಗ ನಿಯಂತ್ರಣ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.