ಬೆಂಗಳೂರು: ‘ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತದ ಹೊಸ ಮುಖವನ್ನು ಜಗತ್ತು ಮೊದಲ ಬಾರಿಗೆ ನೋಡಿದೆ. ಆಪರೇಷನ್ ಸಿಂಧೂರಕ್ಕೆ ಬೆಂಗಳೂರಿನ ನವ ಯುವಕರ ಕೊಡುಗೆಯಿದೆ. ಬೆಂಗಳೂರಿನ ತಂತ್ರಜ್ಞಾನದಿಂದ ಆಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೆಟ್ರೋ ಹಂತ-3 ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಯಶಸ್ವಿಯಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮೂಲಕ ವಿಶ್ವಕ್ಕೆ ಭಾರತದ ವಿಶ್ವರೂಪ ತೋರಿಸಿದ್ದೇವೆ. ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ ಎಂದರು.
ಆಪರೇಷನ್ ಸಿಂಧೂರ ಯಶಸ್ವಿಯಾಗಲು ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ. ಪಾಕಿಸ್ತಾನದೊಳಗಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದ ಆಪರೇಷನ್ ಸಿಂಧೂರ ಸಮಯದಲ್ಲಿ ಜಗತ್ತು ಮೊದಲ ಬಾರಿಗೆ ಭಾರತದ ಹೊಸ ಮುಖವನ್ನು ನೋಡಿತು . ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣಾದ ಬೆಂಗಳೂರು ನವ ಯುವಕರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು
ಬೆಂಗಳೂರು ನವ ಭಾರತದ ಪ್ರಗತಿಯ ಸಂಕೇತ ಆಗಿದೆ. ಬೆಂಗಳೂರು ನಗರ ಗ್ಲೋಬಲ್ ಐಟಿಯಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದೆ. ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ. ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು. ಆಪರೇಷನ್ ಸಿಂಧೂರದಲ್ಲಿ ಬೆಂಗಳೂರು ಮತ್ತು ನಗರದ ಯುವಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರು ವಿಶ್ವದ ದೊಡ್ಡ ನಗರಗಳೊಂದಿಗೆ ಗುರುತಿಸಲ್ಪಟ್ಟಿದೆ ಎಂದರು.
ಭಾರತ ಜಗತ್ತಿನ ಮೂರನೇ ದೊಡ್ಡ ಮೆಟ್ರೋ ಸಂಪರ್ಕ ಇರೋ ದೇಶವಾಗಿದೆ. 2014 ವರೆಗೆ 74 ವಿಮಾನ ನಿಲ್ದಾಣಗಳಿದ್ದವು. ಆದರೆ ಈಗ ಈ ಸಂಖ್ಯೆ 160 ಆಗಿದೆ. ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ನಮ್ಮ ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ ತಂದಿವೆ. ಈ ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಬೆಂಗಳೂರಿನ ಕಂಪನಿಗಳು ಜಾಗತಿಕವಾಗಿ ಸ್ಪರ್ಧಿಸುತ್ತಿದೆ. ಸ್ಪರ್ಧಿಸುವುದು ಮಾತ್ರ ಅಲ್ಲ ಭಾರತವು ಜಾಗತಿಕವಾಗಿ ಸ್ಪರ್ಧಿಸುವುದರ ಜೊತೆಗೆ ಮುನ್ನಡೆಸುವ ಮಟ್ಟಕ್ಕೆ ಬೆಳೆಯಬೇಕು.
ನಮ್ಮ ನಗರಗಳು ಸ್ಮಾರ್ಟ್, ವೇಗ ಮತ್ತು ಪರಿಣಾಮಕಾರಿ ಆದಾಗ ಮಾತ್ರ ನಾವು ಪ್ರಗತಿ ಹೊಂದುತ್ತೇವೆ. ಕರ್ನಾಟಕವನ್ನು ವಿಕಾಸದತ್ತ ಕೊಂಡೊಯ್ಯುತ್ತೇವೆ. ಮೇಕ್ ಇನ್ ಇಂಡಿಯಾದಲ್ಲಿ ಉತ್ಪಾದನೆಯಲ್ಲಿ ಬೆಂಗಳೂರು, ಕರ್ನಾಟಕದ ಪಾಲು ಹೆಚ್ಚು ಹೆಚ್ಚಿರಬೇಕು. ಉತ್ಪಾದನೆಯಾಗುವ ವಸ್ತುಗಳು ನ್ಯೂನತೆಯಿಲ್ಲದೆ ಉತೃಷ್ಟವಾಗಿರಬೇಕು ಎಂದರು.
21ನೇ ಶತಮಾನದಲ್ಲಿ ನಗರ ಯೋಜನೆ ಮತ್ತು ನಗರ ಮೂಲಸೌಕರ್ಯಗಳು ಬಹಳ ಅಗತ್ಯವಾಗಿವೆ ಮತ್ತು ಬೆಂಗಳೂರಿನಂತಹ ನಗರಗಳನ್ನು ಭವಿಷ್ಯಕ್ಕಾಗಿ ನಾವು ಸಿದ್ಧಪಡಿಸಬೇಕಾಗಿದೆ. ಬೆಂಗಳೂರು ಯಾವಾಗಲೂ ನಗರದ ಸ್ಥಾಪಕ ಕೆಂಪೇಗೌಡರ ಪರಂಪರೆಯನ್ನು ಉಳಿಸಿ ಕೊಂಡಿದೆ ಮತ್ತು ಅವರ ಕನಸನ್ನು ನನಸಾಗಿಸುತ್ತಿದೆ ಎಂದರು.