ಮೈಸೂರು: ಜಾತಿ ಗಣತಿಗೆ ನನ್ನ ಸಂಪೂರ್ಣ ವಿರೋಧ ಇದೆ. ಲಿಂಗಾಯತ ಮಹಾಸಭಾ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಇದು ಸರಿ ಅಲ್ಲ. ಧರ್ಮದ ಕಾಲಂ ಹಿಂದೂ, ಜಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದು ಮಾಡುವಂತೆ ವಚನಾನಂದ ಸ್ವಾಮೀಜಿ ಮನವಿ ಮಾಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಸಮೀಕ್ಷೆ ಬಗ್ಗೆ 16 ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹ ಮಾಡಿದೆ. 1561 ಜಾತಿ ಪಟ್ಟಿ ಇದೆ. ಎರಡು ಕಡೆ ನಮ್ಮ ಜಾತಿ ಹೆಸರು ಬಂದಿದೆ. ವೀರಶೈವ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಎಂದಿದೆ.
ಏತನ್ಮಧ್ಯೆ ಲಿಂಗಾಯತ ಮಹಾಸಭಾ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಲಿಂಗಾಯತ ಧರ್ಮ ಅಂತ ಬರೆಯಿರಿ ಎಂದಿದೆ. ಅದು ಸರಿಯಿಲ್ಲ. ಧರ್ಮದ ಮಾನ್ಯತೆ ಸಿಕ್ಕ ನಂತರ ಇದರ ಬಗ್ಗೆ ಚಿಂತನೆ ಮಾಡಿದರೆ ಒಳ್ಳೆಯದು ಎಂದರು.
ತರಾತುರಿಯಲ್ಲಿ ಜಾತಿ ಗಣತಿ ಮಾಡುವುದು ಬೇಡ. ಈ ಸಂಬಂಧ ಕಾನೂನು ಹೋರಾಟವನ್ನು ಸ್ವಾಗತಿಸುತ್ತೇನೆ. ಜಾತಿಗಳಿಗೆ ಕ್ರಿಶ್ಚಿಯನ್ ಹೆಸರು ಸೇರಿಸುತ್ತಿರುವುದು ಸರಿಯಲ್ಲ. ಇದರ ಹಿಂದೆ ಹಿಂದೂ ಧರ್ಮವನ್ನ ಒಡೆಯುವ ಹುನ್ನಾರ ಇದೆ. ಹಿಂದೂಗಳ ಸಂಖ್ಯೆ ಕಡಿಮೆ ತೋರಿಸುವುದು ಇದರ ಉದ್ದೇಶ. ಈ ಸಂಬಂಧ ಸದ್ಯದಲ್ಲೇ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಧರ್ಮಸ್ಥಳ ಪ್ರಕರಣ: ಧರ್ಮಸ್ಥಳ ಪ್ರಕರಣದ ಹಿಂದೆ ಬೇರೆ ಬೇರೆ ಧರ್ಮದವರ ಷಡ್ಯಂತರ ಇದೆ. ವಿದೇಶದಿಂದ ಹಣ ಹೂಡಿಕೆ ಆಗುತ್ತಿದೆ. ಮುಲ್ಲಾ ಸಮೀರನಿಗೂ ಧರ್ಮಸ್ಥಳಕ್ಕೂ ಏನು ಸಂಬಂಧ ಇದೆ. ಆತ ಧರ್ಮಸ್ಥಳಕ್ಕೆ ಕಾಣಿಕೆ ನೀಡಿದ್ದನಾ? ಅನಗತ್ಯವಾಗಿ ಮಾತನಾಡಿ, ಈಗ ಬೀದಿಗೆ ಬಿದ್ದಿದ್ದಾನೆ.
ಧರ್ಮಸ್ಥಳದ ಮಂಜುನಾಥ ಆತನಿಗೆ ಸರಿಯಾಗಿ ಶಿಕ್ಷೆ ಕೊಟ್ಟಿದ್ದಾನೆ. ಧರ್ಮವನ್ನು ಕೆಣಕಿದ ಯಾರಿಗೂ ಉಳಿಗಾಲವಿಲ್ಲ. ಧರ್ಮಸ್ಥಳ ಅತ್ಯಂತ ಪವಿತ್ರ ಕ್ಷೇತ್ರ. ಸತ್ಯದ ಆಣೆ ಪ್ರಮಾಣ ಮಾಡಲು ಅಲ್ಲಿಗೆ ಬರುತ್ತಾರೆ. ಖುದ್ದು ಡಿ.ಕೆ. ಶಿವಕುಮಾರ್ ಇದು ಷಡ್ಯಂತರ ಅಂತ ಹೇಳಿದ್ದಾರೆ. ವಿದೇಶಿ ಟಿವಿಯಲ್ಲೂ ಧರ್ಮಸ್ಥಳದ ಅಪಪ್ರಚಾರ ನಡೆದಿದೆ. ಏನೂ ಸಿಕ್ಕಿಲ್ಲ ಎಂಬುದನ್ನ ಅವರು ತೋರಿಸುತ್ತಾರಾ ಎಂದ ಅವರು ಎಸ್ಐಟಿ ತನಿಖೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.