Home ನಮ್ಮ ಜಿಲ್ಲೆ ಕೊಡಗು ಕೊಡಗು: ಹುಟ್ಟೂರು ಮಾಲಂಬಿಯಲ್ಲಿ ಹುತಾತ್ಮ ಯೋಧ ದಿವಿನ್ ಅಂತ್ಯಕ್ರಿಯೆ

ಕೊಡಗು: ಹುಟ್ಟೂರು ಮಾಲಂಬಿಯಲ್ಲಿ ಹುತಾತ್ಮ ಯೋಧ ದಿವಿನ್ ಅಂತ್ಯಕ್ರಿಯೆ

0


ಕೊಡಗು ಜಿಲ್ಲೆಯ ಯೋಧನ ಅಂತ್ಯಕ್ರಿಯೆ ಸಕಲ ಗೌರವದೊಂದಿಗೆ ಪೂರ್ಣಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಪಿ.ಪಿ.ದಿವಿನ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಅಂತ್ಯಕ್ರಿಯೆಯು ಹುಟ್ಟೂರಾದ ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.

ಸಾಂಪ್ರದಾಯಿಕ ವಿಧಿ ವಿಧಾನಗಳ ನಂತರ ಮಾಲಂಬಿಯ ಜಮೀನಿನಲ್ಲಿ ಅಗ್ನಿಸ್ಪರ್ಶ ಮಾಡುವುದರೊಂದಿಗೆ ದಿವಿನ್ ಪಂಚಭೂತಗಳಲ್ಲಿ ಲೀನವಾದರು.ಇದಕ್ಕೂ ಮೊದಲು ಮೇಜರ್ ನಿಖಿಲ್ ಹಾಗೂ ಸುಬೇದಾರ್ ಮಹೇಶ್ ಜಾಧವ್ ಅವರ ನೇತೃತ್ವದಲ್ಲಿ ಆಗಮಿಸಿದ್ದ ಭಾರತೀಯ ಸೇನಾ ತಂಡ ಹಾಗೂ ಪೊಲೀಸರು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು.

ಮಂಗಳವಾರ ರಾತ್ರಿ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೇನಾ ವಾಹನದ ಮೂಲಕ ಕುಶಾಲನಗರಕ್ಕೆ ತರಲಾಗಿತ್ತು, ಬುಧವಾರ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶಿಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷರಾದ ವಿ.ಪಿ.ಶಶಿಧರ ಸೇರಿದಂತೆ ಹಲವರು ದಿವಿನ್ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಿದರು.

ಬಳಿಕ ದಿವಿನ್ ಅವರ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಕುಶಾಲನಗರದ ಪ್ರಮುಖ ಬೀದಿಯಿಂದ ಮೆರವಣಿಗೆ ಹೊರಟು ಕೂಡಿಗೆ, ಹೆಬ್ಬಾಲೆ ಮಾರ್ಗ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರೊಬೆಷನರಿ ಎಸ್‌ಪಿ ಬೆನಕ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ತಹಶೀಲ್ದಾರ್ ಶ್ರೀಧರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಸದಸ್ಯರಾದ ಸೂದನ ಈರಪ್ಪ, ಚಂದ್ರಾವತಿ ಬಡ್ಡಡ್ಕ, ಪ್ರಮುಖರಾದ ಎಚ್.ಎಸ್.ಚಂದ್ರಮೌಳಿ ಇತರರು ಅಂತಿಮ ನಮನ ಸಲ್ಲಿಸಿದರು.

ಹುತಾತ್ಮ ದಿವಿನ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ವೀಕ್ಷಣೆಗೆ ಆಲೂರು ಸಿದ್ದಾಪುರದ ಶಾಲಾ ಆವರಣದಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅವರು ಸಿದ್ಧತೆ ಮಾಡಿಸಿದ್ದರು. ಅನಂತರ ನೇರವಾಗಿ ಮಾಲಂಬಿಯ ಮನೆಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಆ ಸಂಧರ್ಭದಲ್ಲಿಯೂ ಸಹ ಸಾರ್ವಜನಿಕರ ದರ್ಶನಕ್ಕೆ ಕೆಲಕಾಲ ಪಾರ್ಥಿವ ಶರೀರವನ್ನು ಇಡಲಾಗಿತ್ತು, ಗ್ರಾಮಸ್ಥರು, ಬಂಧು-ಬಳಗದವರು, ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

‘ಹುತಾತ್ಮ ಯೋಧ ದಿವಿನ್ ಅವರ ತಾಯಿ ಜಲಜಾಕ್ಷಿ ಅವರು ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಬಂಧು-ಬಳಗದವರು ಜೋರಾಗಿ ಅಳುತ್ತಾ ಕಣ್ಣೀರಿಟ್ಟ ಹೃದಯ ವಿದ್ರಾವಕ ದೃಶ್ಯ ಮನಕಲಕುವಂತಿತ್ತು.’ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಹುತಾತ್ಮ ಯೋಧ ದಿವಿನ್ ಕುಟುಂಬದ ಸಂಬಂಧಿ ಚಿರಾಗ್ ನೆರವೇರಿಸಿದರು.
ಆಲೂರು ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಜನರು ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಹುತಾತ್ಮ ಯೋಧ ದಿವಿನ್‌ಗೆ ಗೌರವ ನಮನ ಸಲ್ಲಿಸಿದರು.

Exit mobile version