ಹುಬ್ಬಳ್ಳಿ: ‘ಸಂಯುಕ್ತ ಕರ್ನಾಟಕ’ ದಿನ ಪತ್ರಿಕೆ ಈಗ ಶತಮಾನದತ್ತ ಹೆಜ್ಜೆ ಹಾಕುತ್ತಾ, ಕನ್ನಡ ಮಾಧ್ಯಮ ಲೋಕದಲ್ಲಿ ಹಾಗೂ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಪತ್ರಿಕೆಯನ್ನು ನಡೆಸುತ್ತಿರುವ ದೇಶದ ಏಕೈಕ ಟ್ರಸ್ಟ್ ಆಗಿ ‘ಲೋಕ ಶಿಕ್ಷಣ ಟ್ರಸ್ಟ್’ – ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಇಂದು ನಗರದ ವಿದ್ಯಾನಗರದ ಸ್ಟೆಲ್ಲರ್ ಮಾಲ್ನಲ್ಲಿ ‘ಸಂಯುಕ್ತ ಕರ್ನಾಟಕ’ದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಕನ್ನಡ ನಾಡಿನ ನುಡಿ- ನೆಲ- ಜಲ ಸಂರಕ್ಷಕನಾಗಿ ಸೇವೆ ಸಲ್ಲಿಸಿ, ಪ್ರತಿದಿನ ಶ್ರೀ ಸಾಮಾನ್ಯನಿಗೆ ದೈನಂದಿನ ಆಗುಹೋಗುಗಳ ಮಾಹಿತಿ ನೀಡುತ್ತಿರುವ ಪತ್ರಿಕೆ.
ಲೋಕ ಶಿಕ್ಷಣ ಟ್ರಸ್ಟ್ ಕನ್ನಡ ಮಾಧ್ಯಮ ಲೋಕದಲ್ಲಿ ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದು ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಪತ್ತಿಕೆಯನ್ನು ನಡೆಸುತ್ತಿರುವ ದೇಶದ ಏಕೈಕ ಟ್ರಸ್ಟ್ ಇದಾಗಿದ್ದು, ಜನಜಾಗೃತಿ, ಭಾಷೆ, ಬದುಕು ಮತ್ತು ಸುಖಿ ಸಮಾಜಕ್ಕಾಗಿ ತನ್ನನ್ನು ತಾನು ಸಕ್ರಿಯವಾಗಿ ಮತ್ತು ನಿಸ್ವಾರ್ಥದಿಂದ ತೊಡಗಿಸಿಕೊಂಡಿರುವ ಸಂಸ್ಥೆ ಎಂದರು.
ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಸ್ವದೇಶಿ ಆಂದೋಲನ, ಕನ್ನಡ ನಾಡಿನ ನಾಡು-ನುಡಿ, ನೆಲ-ಜಲ ಸಂರಕ್ಷಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ, ಸಮಾಜದಲ್ಲಿ ತನ್ನದೇ ಆದ ಸೇವೆಯನ್ನು ನಾಡಿಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ನೀಡಿದೆ.
ಈ ಸುಸಂದರ್ಭದಲ್ಲಿ ಸಚಿವ ಹೆಚ್ ಕೆ ಪಾಟೀಲ, ಮುಖ್ಯಸಚೇತಕ ಸಲೀಂ ಅಹಮ್ಮದ್, ಲೋಕ ಶಿಕ್ಷಣ ಟ್ರಸ್ಟ್ನ ಚೇರ್ಮನ್ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಟ್ರಸ್ಟಿಗಳಾದ ಯುಬಿ ವೆಂಕಟೇಶ, ಶಾಸಕ ಡಿ ಆರ್ ಪಾಟೀಲ, ಕಾರ್ಯದರ್ಶಿ ಹರಿ ಚೆನ್ನಕೇಶವ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
