ಚಿಕ್ಕಮಗಳೂರು: ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದಕ್ಕೆ ಮೂವರು ವಿದ್ಯಾರ್ಥಿಗಳನ್ನು ಪ್ರಿನ್ಸಿಪಾಲ್ ಕಾಲೇಜಿನಿಂದ ಹೊರ ಕಳುಹಿಸಿದ ಘಟನೆ ಸೋಮವಾರ ನಗರದಲ್ಲಿ ಎಂಇಎಸ್ ಪಿಯು ಕಾಲೇಜಿನಲ್ಲಿ ನಡೆದಿದ್ದು, ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಮೊದಲ ವರ್ಷದ ಪಿಯುಸಿ ತರಗತಿಯ ಮೂವರು ವಿದ್ಯಾರ್ಥಿಗಳು ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿನ್ಸಿಪಾಲ್, ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂಡಲು ಅವಕಾಶ ಕೊಡದೆ ಹೊರಗೆ ಕಳುಹಿಸಿದ್ದಾರೆ. ಅಲ್ಲದೇ ಅಯ್ಯಪ್ಪಸ್ವಾಮಿ ಮಾಲೆ ತೆಗೆದು ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕಾಲೇಜಿಗೆ ಹಿಂದೂಪರ ಸಂಘಟನೆಗಳ ಮುಖಂಡರು ಧಾವಿಸಿದ್ದು, ಪ್ರಿನ್ಸಿಪಾಲರ ತಾರತಮ್ಯದ ಬಗ್ಗೆ ಧ್ವನಿ ಎತ್ತಿ, ಕಾಲೇಜ್ ಅಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿನ್ಸಿಪಾಲ್, ಕಾಲೇಜಿನಲ್ಲಿ ಸಮವಸ್ತç ಬಿಟ್ಟರೆ ಬೇರೆ ಯಾವುದೇ ವಸ್ತçಸಂಹಿತೆಗೆ ಅವಕಾಶವಿಲ್ಲ. ಹೀಗಾಗಿ ಈ ರೀತಿ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಅದಕ್ಕೆ ಅಸಮಾಧಾನಗೊಂಡಿರುವ ಹಿಂದೂಪರ ಸಂಘಟನೆಗಳ ಮುಖಂಡರು ಯಾರಾದರೂ ಬುರ್ಖಾ ಧರಿಸಿ ಬಂದರೆ ಇದೇ ರೀತಿ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಮಾಲೆ ಧರಿಸಿದ ಹುಡುಗರು ಕಾಲೇಜಿನ ಸಮವಸ್ತ್ರದಲ್ಲಿಯೇ ಬಂದಿದ್ದಾರೆ. ಜೊತೆಗೆ ಮೇಲೆ ಒಂದು ಕಪ್ಪುವಸ್ತ್ರ ಧರಿಸಿದ್ದಾರೆ ಅಷ್ಟೇ. ಇದು ನಿಮ್ಮ ವಸ್ತ್ರಸಂಹಿತೆಯ ಉಲ್ಲಂಘನೆ ಹೇಗಾಗುತ್ತದೆ. ಉದ್ದೇಶ ಪೂರ್ವಕವಾಗಿ ನೀವು ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ಈ ರೀತಿ ಕ್ರಮ ಕೈಗೊಳ್ಳುತ್ತಿದ್ದೀರಾ ಎಂದು ಆರೋಪಿಸಿದ್ದಾರೆ.
