ಬೆಂಗಳೂರು ನಗರದ ಸಂಚಾರ ದಟ್ಟಣೆ ಬಗೆಹರಿಸಲು ಕರ್ನಾಟಕ ಸರ್ಕಾರ ಹಲವು ಕ್ರಮ ಕೈಗೊಂಡಿದೆ. 56 ಕೋಟಿ ಅನುದಾನದಲ್ಲಿ ನಗರದಲ್ಲಿ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿ ಅಡಿಯಲ್ಲಿ 110 ಜಂಕ್ಷನ್ಗಳಲ್ಲಿ ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್ಗಳನ್ನು ರೂ.56.45 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳ ಕುರಿತಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ರಾಜಧಾನಿಯಲ್ಲಿ 2ನೇ ಹಂತದ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲಿಂಗ್ ಯೋಜನೆಯನ್ನು 110 ಜಂಕ್ಷನ್ಗಳಲ್ಲಿ ಅಳವಡಿಸಲಾಗುವುದು.
ಸಿಗ್ನಲಿಂಗ್ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸಲು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಿ, ಸಾರಿಗೆ ಸಂದಣಿ ಆಧರಿಸಿ ವ್ಯವಸ್ಥೆಯು ಸಿಗ್ನಲಿಂಗ್ ಕಾಲಬದ್ಧವಾಗಿ ಬದಲಾವಣೆಯಾಗುವ ಬದಲು ಕ್ರಿಯಾಶೀಲವಾಗಿ ಬದಲಾವಣೆಯಾಗುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಸಂಪುಟದ ತೀರ್ಮಾನಗಳು
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ರೈಸಿಂಗ್ ಮೇನ್ ಸೇರಿ ರಾಜಕಾಲುವೆಯ ಬಳಿಯ ಬಳಸಿದ ನೀರಿನ ಸಂಸ್ಕರಣಾ ಘಟಕದ ಆವರಣದಲ್ಲಿರುವ ಸಂಸ್ಕರಿಸಿದ ನೀರಿನ ಪಂಪಿಂಗ್ ಸ್ಟೇಷನ್, ದೇವನಹಳ್ಳಿ ಬಳಿಯ ಐಟಿ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿರುವ 40 ಎಂಎಲ್ಡಿ ಸಾಮರ್ಥ್ಯದ ತೃತೀಯ ಹಂ ತದ ಸಂಸ್ಕರಣಾ ಘಟಕದ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 45 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಒಪ್ಪಿಗೆ.
- ಎಲೆಮಲ್ಲಪ್ಪಚೆಟ್ಟಿಯಲ್ಲಿರುವ 15 ದಶಲಕ್ಷ ಲೀ. ಸಾಮರ್ಥ್ಯದ ತ್ಯಾಜ್ಯ ನೀರು ಶುದ್ದೀಕರಣ ಘಟಕವನ್ನು ಮತ್ತು ಸಾದರಮಂಗಲದಲ್ಲಿ 5 ದ.ಲ.ಲೀ ಸಾಮರ್ಥ್ಯ ಘಟಕದ ಸಮಗ್ರ ಕಾರ್ಯಚರಣೆ ಮತ್ತು ನಿರ್ವಹಣೆಯನ್ನು 19.07 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರತಿನಿತ್ಯ 1750 ಮೆಟ್ರಿಕ್ ಟನ್ ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ತ್ಯಾಜ್ಯದ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವ 750 ಟಿಪಿಡಿಯ ಒಂದು ಪ್ಯಾಕೇಜ್ ಹಾಗೂ 500 ಟಿಪಿಡಿಯ ಎರಡು ಪ್ಯಾಕೇಜ್ಗಳ ಯೋಜನೆಗೆ ಅನುಮೋದನೆ ನೀಡಿದೆ.
- ಬೆಳ್ಳಂದೂರು ತ್ಯಾಜ್ಯ ನೀರು ಶುದ್ದೀಕರಣ ಘಟಕದ 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರೂ.23.36 ಕೋಟಿ ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹೊರಮಾವುನಲ್ಲಿರುವ ಬಳಸಿದ ನೀರು ಸಂಸ್ಕರಣಾ ಘಟಕ ನಿರ್ವಹಣೆಗೆ 15 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.