ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಫೆ. ೨೭ ರಂದು ಬೆಳಿಗ್ಗೆ ೧೧ ಗಂಟೆಯಿಂದ ರಾತ್ರಿ ೧೧.೩೦ ಗಂಟೆಯವರೆಗೆ ವಾಹನಗಳ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಮನವಿ ಮಾಡಿದ್ದಾರೆ.
ಕಾರವಾರ ರೋಡ್ ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುವ ವಾಹನಗಳಿಗೆ, ಬೈಪಾಸ್ ಮಾರ್ಗವಾಗಿ ತಾರಿಹಾಳ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಸಂಚಾರ ಮಾಡಬಹುದು. ಎಂ.ಟಿ.ಮಿಲ್ಲ್ ಕ್ರಾಸ್ ಕಡೆಯಿಂದ ಇಂಡಿಪಂಪ ಸರ್ಕಲ್ ಕಡೆಗೆ ವಾಹನಗಳನ್ನು ಬಿಡುವುದಿಲ್ಲ. ಅದರ ಬದಲಾಗಿ ಚಾಟ್ನಿ ಮಠ ಕ್ರಾಸ್, ಕಮರಿಪೇಟ್ ಪಿ.ಎಸ್ ಕ್ರಾಸ್, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪೂರ ಚೌಕ, ಗಬ್ಬೂರ ಮಾರ್ಗ ಅಥವಾ ವಾಣಿ ವಿಲಾಸ ಸರ್ಕಲ್ ಮೂಲಕ ತೆರಳಿ, ಗೋಕುಲ ರೋಡ್ ಮುಖಾಂತರ ಬೈಪಾಸ್ ಸೇರುವುದು.
ನ್ಯೂ ಇಂಗ್ಲೀಷ ಸ್ಕೂಲ್ ಕ್ರಾಸ್ ಕಡೆಯಿಂದ ಇಂಡಿ ಪಂಪ ಸರ್ಕಲ್ ಕಡೆಗೆ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅಕ್ಷಯ ಪಾರ್ಕ ಸರ್ಕಲ್ ಕಡೆಯಿಂದ ಮುರಡೇಶ್ವರ ಫ್ಯಾಕ್ಟರಿ ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಯಾವುದೇ ಭಾರೀ ವಾಹನಗಳು ಸಂಚರಿಸದಂತೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಸಿದ್ಧಾರೂಢ ಮಠಕ್ಕೆ ಜಾತ್ರೆಗೆ ಬರುವ ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಇತರೇ ವಾಹನಗಳಿಗೆ ಸಿದ್ಧಾರೂಢ ಮಠದ ಸುತ್ತ ಮುತ್ತಲು ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಹೆಚ್ಚಿನ ವಾಹನ ದಟ್ಟಣೆಯಾದಲ್ಲಿ ಅನುಕೂಲಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆಯನ್ನು ಮಾಡಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.