ವಿಜಯಪುರ: ಪಾಲಿಕೆ ಮಾಜಿ ಸದಸ್ಯರ ಪುತ್ರ ಪಿಸ್ತೂಲ್ ಮೂಲಕ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಶನಾಮ್ ಮಿರ್ಜಿ (೨೨) ಎಂದು ಗುರುತಿಸಲಾಗಿದೆ. ಶಿಖಾರ ಖಾನೆಯ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಅಶನಾಮ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಕಾಶ್ ಮಿರ್ಜಿ ಅವರ ಮಗನಾಗಿದ್ದು, ತಂದೆಯ ಹೆಸರಿನಲ್ಲಿದ್ದ ಪರವಾನಿಗೆ ಹೊಂದಿದ ಪಿಸ್ತೂಲ್ನಿಂದ ಮನೆಯ ಬೆಡ್ ರೂಂನಲ್ಲಿ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಈ ವೇಳೆ, ಮನೆಯಲ್ಲೇ ಇದ್ದ ತಂದೆ, ತಾಯಿ ಹಾಗೂ ಕುಟುಂಬಸ್ಥರು ಗುಂಡಿನ ಶಬ್ದ ಕೇಳುತ್ತಲೇ ಕೊಠಡಿಯ ಬಾಗಿಲು ತೆರೆದು ನೋಡಿದ್ದಾರೆ.
ತಕ್ಷಣವೇ ಬಿಎಲ್ಡಿಇ ಆಸ್ಪತ್ರೆಗೆ ಮಗನನ್ನು ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ತಲೆಗೆ ಒಂದು ಗುಂಡು ಹೊಡೆದುಕೊಂಡಿರುವುದು ಗೊತ್ತಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಿಗಾರ್, ಸಿಪಿಐ ಮಲ್ಲಯ್ಯ ಮಠಪತಿ ಹಾಗೂ ಎಪಿಎಂಸಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯಕ್ಕೆ ಯುವಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಿಎಲ್ಡಿಇ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸ್ಥಳಾಂತರಿಸಲಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.