ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಶತಾವಧಾನಿ ಆರ್. ಗಣೇಶ್ ಆಯ್ಕೆ

0
144

ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗ ನೇತೃತ್ವದಲ್ಲಿ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಾಡಿನ ಹಿರಿಯ ಬಹುಶ್ರುತ ವಿದ್ವಾಂಸ, ಬಹುಭಾಷಾ ವಿಶಾರದ, ಏಕವ್ಯಕ್ತಿ ಯಕ್ಷಗಾನದ ಹರಿಕಾರ, ಹಲವು ಶ್ರೇಷ್ಠ ಗ್ರಂಥಗಳನ್ನು ಸಾರಸ್ವತ ಲೋಕಕ್ಕೆ ನೀಡಿ ವಿದ್ವಜ್ಜನ ಗೌರವಕ್ಕೆ ಭಾಜನರಾದ ಶತಾವಧಾನಿ ಡಾ. ಆರ್. ಗಣೇಶ್ ಆಯ್ಕೆಯಾಗಿದ್ದಾರೆ.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ಈ ಪ್ರಶಸ್ತಿಯು 60 ಸಾವಿರ ರೂ. ನಗದು ಸಹಿತ ಸನ್ಮಾನವನ್ನು ಒಳಗೊಂಡಿದೆ. ಜುಲೈ 4ರಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.