ಬಾಗಲಕೋಟೆ(ಕುಳಗೇರಿ ಕ್ರಾಸ್): ನವಿಲುತೀರ್ಥ ಜಲಾಶಯದ ಮೇಲ್ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಮಲಪ್ರಭಾ ನದಿ ತಟದಲ್ಲಿನ ಪ್ರವಾಹದ ನೀರು ಸರಿದು ಜನರು ನಿಟ್ಟುಸಿರು
ಬಿಟ್ಟಿದ್ದರು. ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಿದ್ದು ನವಿಲುತೀರ್ಥ ಜಲಾಶಯದ ಒಳ ಹರಿವು ಹೆಚ್ಚಾಗಿದೆ. 2ಸಾವಿರ ಇದ್ದ ಹೊರಹರಿವು ಇದ್ದಕ್ಕಿದ್ದಂತೆ ಮಂಗಳವಾರ 9,794 ಕ್ಯೊಸೆಕ್ಗೆ ಹೆಚ್ಚಿದ್ದು ಜನರಲ್ಲಿ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ.
ಪ್ರವಾಹದ ನೀರು ಇಳಿಮುಖವಾಗಿದ್ದರಿಂದ ಜಮೀನುಗಳಲ್ಲಿನ ನೀರು ಕಡಿಮೆಯಾಗಿತ್ತು. ಗೋವನಕೊಪ್ಪ ಹಾಗೂ ಕಿತ್ತಲಿ ಸೇತುವೆಗಳ ಸಂಚಾರ ಸಹ ಪ್ರಾರಂಭವಾಗಿದ್ದವು. ಮತ್ತೆ
ಪ್ರವಾಹದ ನೀರು ಹೆಚ್ಚಿದ್ದು ಸೇತುವೆಗಳು ಜಲಾವೃತಗೊಂಡಿವೆ ಸಂಚಾರ ಸ್ಥಗಿತವಾಗಿದೆ. ಜನರಿಗೆ ಮತ್ತೆ ಸುತ್ತಿ ಬಳಸಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.