ಬೆಂಗಳೂರು: ಮೌಲ್ವಿಗಳ ಸಲಹೆ ಪಡೆದು ಸರ್ಕಾರ ನಡೆಸಿದರೆ ಮುಸ್ಲಿಮ್ರಿಗೆ ಮಾತ್ರ ಮೀಸಲಾತಿ ಸಿಗುತ್ತದೆ ಎನ್ನುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾಕರದ ಆಡಳಿತ ವೈಖರಿಯೇ ಸಾಕ್ಷಿ ಎಂದು ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಟೀಕೆ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ ಅಂದು ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ವಿರೂಪ ಮಾಡಿದ್ದು ಕಾಂಗ್ರೆಸ್,ಇಂದು ಮುಸ್ಲಿಂರಿಗೆ ಮಾತ್ರ ಮೀಸಲಾತಿ ನೀಡಿ ಸಂವಿಧಾನವನ್ನೇ ವಿರೂಪ ಮಾಡುತ್ತಿದೆ, ಡಾ.ಅಂಬೇಡ್ಕರ್ ಮೀಸಲಾತಿ ನೀಡಿದ್ದು ಧರ್ಮದ ಆಧಾರದ ಮೇಲೆ ಅಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುತ್ತಿದೆ. ಮೀಸಲಾತಿಯನ್ನು ಕೇವಲ ತಮ್ಮ ಮತ ಬ್ಯಾಂಕ್ ರಾಜಕಾರಣಕೊಸ್ಕರ ಬಳಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಕಾಂಗ್ರೆಸ್ ಸರ್ಕಾರ ಈ ಹಿಂದೆ ಬಜೆಟ್ನಲ್ಲಿ ಮುಸ್ಲಿರಿಗೆ ಶೇ.4 ರಷ್ಟು ಗುತ್ತಿಗೆ ಮೀಸಲಾತಿ ಘೋಷಣೆ ಮಾಡಿತ್ತು. ಸಾರ್ವಜನಿಕರ ತೀವ್ರ ಒತ್ತಡದ ನಡುವೆಯೂ ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಿತ್ತು. ಈ ವಿಧೇಯಕ ರಾಷ್ಟ್ರಪತಿಗಳ ಒಪ್ಪಿಗೆಗೆ ಬಾಕಿ ಇರುವಾಗಲೇ ಹಠಕ್ಕೆ ಬಿದ್ದು ಇನ್ನೊಂದು ಮಾರ್ಗದಲ್ಲಿ ಮುಸ್ಲಿಂ ಓಲೈಕೆಗೆ ಸರ್ಕಾರ ಮುಂದಾಗಿದೆ. ಯಾವುದೇ ಶಾಸನಾತ್ಮಕ ನಿಯಮಗಳನ್ನು ಪಾಲಿಸದೇ ಮೀಸಲಾತಿಯ ಆಶಯವನ್ನೇ ಸಿದ್ದರಾಮಯ್ಯ ಸರ್ಕಾರ ಧ್ವಂಸ ಮಾಡುತ್ತಿದೆ ಎಂದಿದ್ದಾರೆ.